ಬಂಟ್ವಾಳ: ವಿದೇಶದಿಂದ ಬಂದವರ ಆರೋಗ್ಯ ವಿಚಾರಿಸಿದ ಆಶಾ ಕಾರ್ಯಕರ್ತೆಗೆ ಜೀವ ಬೆದರಿಕೆ
ಇಬ್ಬರ ಬಂಧನ
ಉಮೇಶ, ಮಾರಪ್ಪ ಪೂಜಾರಿ
ಬಂಟ್ವಾಳ, ಎ.3: ವಿದೇಶದಿಂದ ಆಗಮಿಸಿದ ಇಬ್ಬರ ಆರೋಗ್ಯ ವಿಚಾರಿಸಿದ ಆಶಾ ಕಾರ್ಯಕರ್ತೆಗೆ ಕರೆ ಮಾಡಿ ವ್ಯಕ್ತಿಗಳಿಬ್ಬರು ನಿಂದಿಸಿ, ಜೀವ ಬೆದರಿಕೆ ಹಾಕಿದ ಘಟನೆ ನಡೆದಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
ಬಂಧಿತರನ್ನು ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂದು ಗುರುತಿಸಲಾಗಿದೆ.
ಆರೋಗ್ಯ ಇಲಾಖೆಯಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿರುವ ಬಂಟ್ವಾಳದ ಅಮ್ಟಾಡಿ ಗ್ರಾಮದ ತುಳಸಿ (48) ಎಂಬವರು ವಿದೇಶದಿಂದ ಆಗಮಿಸಿದ್ದ ಕಿನ್ನಿಬೆಟ್ಟು ಪರಿಸರದ ನಿತೇಶ ಹಾಗೂ ಕಲಾಯಿ ಪರಿಸರದ ಜಯಂತ ಎಂಬವರಿಗೆ ಎ.1 ರಂದು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ನಿತೇಶನ ಸಂಬಂಧಿ ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂಬವರು ಆಶಾ ಕಾರ್ಯಕರ್ತೆ ತುಳಸಿ ಅವರಿಗೆ ಕರೆ ಮಾಡಿದ್ದು, ಆರೋಗ್ಯ ವಿಚಾರಿಸಿದ ವಿಚಾರವನ್ನು ಮುಂದಿಟ್ಟು ನಿಂದಿಸಿದ್ದಲ್ಲದೇ, ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ನಿಂದನೆ, ಜೀವ ಬೆದರಿಕೆ ಆರೋಪದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶನನ್ನು ಪೊಲೀಸರು ಬಂಧಿಸಿದ್ದಾರೆ.