ಬೆಂಗಳೂರು: ಕೊರೋನ ಪೀಡಿತರ ಚಿಕಿತ್ಸೆಗಾಗಿ ರಾಮಯ್ಯ ಆಸ್ಪತ್ರೆಯಲ್ಲಿ 200 ಹಾಸಿಗೆಗಳು ಮೀಸಲು
ಬೆಂಗಳೂರು, ಎ.5: ರಾಜ್ಯದಲ್ಲಿ ಉಲ್ಬಣವಾಗುತ್ತಿರುವ ಕೊರೋನ ಚಿಕಿತ್ಸೆಗಾಗಿ ರಾಮಯ್ಯ ಆಸ್ಪತ್ರೆಯು ಸಿದ್ಧವಾಗಿದ್ದು, ಕೊರೋನ ವೈರಾಣು ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕವಾಗಿ 200 ಹಾಸಿಗೆಗಳನ್ನು ಒದಗಿಸುವುದಾಗಿ ಗೋಕುಲ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಆರ್.ಜಯರಾಂ ತಿಳಿಸಿದ್ದಾರೆ.
ಡಾ.ಜಯರಾಂ ನೇತೃತ್ವದ ತಂಡ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿ ಕೊರೋನ ಚಿಕಿತ್ಸೆಗಾಗಿ ಸರಕಾರದ ಜತೆ ಕೈ ಜೋಡಿಸುವುದಾಗಿ ಭರವಸೆ ನೀಡಿದ ಅವರು, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸೇವೆ ನೀಡುತ್ತಿರುವ ರಾಮಯ್ಯ ಸಂಸ್ಥೆ ಈ ಮಹಾಮಾರಿ ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಸರಕಾರಕ್ಕೆ ಸಾಥ್ ನೀಡುತ್ತದೆ. ಕೊರೋನ ಚಿಕಿತ್ಸೆಗೆ ಅಗತ್ಯವಿರುವ ಚಿಕಿತ್ಸಾ ಕಿಟ್ ಹಾಗೂ ಇತರ ಸುರಕ್ಷಾ ಸಲಕರಣೆಗಳನ್ನು ಸರಕಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ಕಂದಾಯ ಸಚಿವ ಆರ್.ಅಶೋಕ್, ಗೋಕುಲ ಶಿಕ್ಷಣ ಪ್ರತಿಷ್ಠಾನ(ವೈದ್ಯಕೀಯ) ಮುಖ್ಯ ಕಾರ್ಯ ನಿರ್ವಾಹಕ ಎಂ.ಆರ್.ಶ್ರೀನಿವಾಸಮೂರ್ತಿ, ರಾಮಯ್ಯ ಮೆಮೊರಿಯಲ್ ಆಸ್ಪತ್ರೆಯ ಅಧ್ಯಕ್ಷ ಡಾ.ನರೇಶ್ ಶೆಟ್ಟಿ, ಅಸೊಸೀಯೇಟ್ ಡೀನ್ ಡಾ.ಹರೀಶ್ ಉಪಸ್ಥಿತರಿದ್ದರು.