ಕೋವಿಡ್ -19 : ಪರಿಹಾರ ನಿಧಿಗೆ ಗವಾಸ್ಕರ್ 59 ಲಕ್ಷ ರೂ. ದೇಣಿಗೆ
ದಾನಿಗಳ ಪಟ್ಟಿಗೆ ಪೂಜಾರ ಸೇರ್ಪಡೆ
ಹೊಸದಿಲ್ಲಿ, ಎ.7: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಮಂಗಳವಾರ ಕೋವಿಡ್ -19 ಪರಿಹಾರ ನಿಧಿಗೆ 59 ಲಕ್ಷ ರೂ. ದೇಣಿಗೆ ನೀಡಿದರೆ, ಟೆಸ್ಟ್ ಆಟಗಾರ ಚೇತೇಶ್ವರ ಪೂಜಾರ ಅವರು ಪಿಎಂ-ಕೇರ್ಸ್ ನಿಧಿಗೆ ಕೊಡುಗೆಯನ್ನು ನೀಡಿದ್ದು, ಆದರೆ ದೇಣಿಗೆಯ ಮೊತ್ತವನ್ನು ಬಹಿರಂಗಪಡಿಸಿಲ್ಲ.
ಕೋವಿಡ್-19 ವಿರುದ್ಧ ಹೋರಾಟದಲ್ಲಿ ಪೂಜಾರ ಅವರು ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮತ್ತು ಕೇದಾರ್ ಜಾಧವ್ ಅವರ ಜೊತೆ ಸೇರಿಕೊಂಡಿದ್ದಾರೆ. ಇವರು ಕ್ರಿಕೆಟಿಗರ ಪೈಕಿ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಮಾಜಿ ಆಟಗಾರರಲ್ಲಿ, ಸಚಿನ್ ತೆಂಡುಲ್ಕರ್ ಅತ್ಯಂತ ಗಮನಾರ್ಹ ಕೊಡುಗೆ ನೀಡಿದ್ದಾರೆ.
ಈಗ ಆಟದ ನಿರೂಪಕ ಮತ್ತು ವಿಶ್ಲೇಷಕನಾಗಿರುವ ಗವಾಸ್ಕರ್ ಅವರು ಈ ಕೊಡುಗೆಯನ್ನು ಸ್ವತಃ ಬರಂಗಪಡಿಸಲಿಲ್ಲ. ಆದರೆ ಮುಂಬೈನ ಮಾಜಿ ನಾಯಕ ಅಮೋಲ್ ಮುಜುಂದಾರ್ ಇದೇ ರೀತಿ ಟ್ವೀಟ್ ಮಾಡಿದ ನಂತರ ಅವರ ನಿಕಟವರ್ತಿಯೊಬ್ಬರು ಗವಾಸ್ಕರ್ ನೀಡಿರುವ ಕೊಡುಗೆಯನ್ನು ದೃಢಪಡಿಸಿದ್ದಾರೆ.
ಗವಾಸ್ಕರ್ ಕೋವಿಡ್-19 ಪರಿಹಾರ ನಿಧಿಗೆ 59 ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎನ್ನುವುದು ಗೊತ್ತಾಗಿದೆ. ಇದರಲ್ಲಿ 35 ಲಕ್ಷ ರೂ. ಪ್ರಧಾನ ಮಂತ್ರಿ ಪರಿಹರ ನಿಧಿಗೆ ಮತ್ತು 24 ಲಕ್ಷ ರೂ. ಮಹಾರಾಷ್ಟ್ರ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ಮುಜುಂದಾರ್ ಹೇಳಿದರು.
ಈ ನಿರ್ಣಾಯಕ ಹಂತದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವೈದ್ಯರು, ಪ್ಯಾರಾ ವೈದ್ಯಕೀಯ ಸಿಬ್ಬಂದಿ ಮತ್ತು ಪೊಲೀಸರು ಸೇರಿದಂತೆ ಎಲ್ಲಾ ಮುಂಚೂಣಿಯ ಯೋಧರಿಗೆ ಪೂಜಾರ ಧನ್ಯವಾದಗಳನ್ನು ಅರ್ಪಿಸಿದರು.
‘‘ನನ್ನ ಕುಟುಂಬ ಮತ್ತು ನಾನು ಪಿಎಂ-ಕೇರ್ಸ್ ಫಂಡ್ ಮತ್ತು ಗುಜರಾತ್ ಸಿಎಂ ರಿಲೀಫ್ ಫಂಡ್ಗೆ ನಮ್ಮ ಕೊಡುಗೆಗಳನ್ನು ನೀಡಿದ್ದೇನೆ ಮತ್ತು ನೀವು ನೀಡುತ್ತೀರಿ ಎಂದು ಭಾವಿಸುತ್ತೇವೆ. ‘‘ಪ್ರತಿಯೊಂದು ಕೊಡುಗೆಗಳು ಲೆಕ್ಕಕ್ಕೆ ಸೇರುತ್ತದೆ. ಆದ್ದರಿಂದ ನಾವೆಲ್ಲರೂ ನಮ್ಮ ಕೆಲಸವನ್ನು ಮಾಡೋಣ ಮತ್ತು ಒಟ್ಟಿಗೆ ಹೋರಾಟದಲ್ಲಿ ನಾವು ಖಂಡಿತವಾಗಿಯೂ ಜಯಿಸುತ್ತೇವೆ’’ ಎಂದು ಪೂಜಾರ ಹೇಳಿದ್ದಾರೆ. ‘‘ಮಾನವೀಯ ಸೇವೆ ಸಲ್ಲಿಸುವಲ್ಲಿ ಅವರ ಸಮರ್ಪಣೆ, ಧೈರ್ಯ ಮತ್ತು ತ್ಯಾಗಕ್ಕಾಗಿ ವೈದ್ಯಕೀಯ ವೃತ್ತಿಪರರು, ಪೊಲೀಸರು, ದಿನಸಿ ಸಿಬ್ಬಂದಿ ಮತ್ತು ಇತರ ಅನೇಕ ಮುಂಚೂಣಿಯ ಯೋಧರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆ ಯನ್ನು ತಿಳಿಸಲು ನಾವು ಬಯಸುತ್ತೇವೆ ಎಂದು ಅವರು ಹೇಳಿದರು.