ಹೆಚ್ಚು ನಿಂಬೆಹಣ್ಣು ಉಪಯೋಗಿಸಿ: ಕೊರೋನ ವೈರಸ್ ಹಿನ್ನೆಲೆಯಲ್ಲಿ ಸಚಿವ ಬಿ.ಸಿ.ಪಾಟೀಲ್ ಸಲಹೆ
ಯಾದಗಿರಿ, ಎ.8: ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ ಕೊರೋನ ವೈರಸ್ನಿಂದ ಆರೋಗ್ಯ ಹದಗೆಡುತ್ತದೆ. ಹಾಗಾಗಿ, ವಿಟಮಿನ್ 'ಸಿ' ಸತ್ವವುಳ್ಳ ನಿಂಬೆಹಣ್ಣಿನಲ್ಲಿ ರೋಗನಿರೋಧಕ ಶಕ್ತಿ ಇದೆ. ಜನರು ಹೆಚ್ಚೆಚ್ಚು ನಿಂಬೆಹಣ್ಣು ಉಪಯೋಗಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ನುಡಿದರು.
ಬುಧವಾರ ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೃಷಿ, ತೋಟಗಾರಿಕಾ, ಆರೋಗ್ಯ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಜೊತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ದೇಹದಲ್ಲಿ ಆರೋಗ್ಯವಿರುತ್ತದೆ. ಇಂತಹ ರೋಗನಿರೋಧಕ ಶಕ್ತಿ ವಿಟಮಿನ್ 'ಸಿ' ಸತ್ವ ನಿಂಬೆಹಣ್ಣಿನಲ್ಲಿದೆ. ಜನರು ಹೆಚ್ಚೆಚ್ಚು ನಿಂಬೆಹಣ್ಣು ಉಪಯೋಗಿಸಿ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ರೈತರಿಗೂ ಸಹಕರಿಸಿದಂತಾಗುತ್ತದೆ ಎಂದು ಹೇಳಿದರು.
ಸೌತೆಕಾಯಿ, ನಿಂಬೆಹಣ್ಣು, ಕಲ್ಲಂಗಡಿ ತಿಂದರೆ ಕೊರೋನ ವೈರಸ್ ಬರುತ್ತದೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸಿದ್ದರು. ಇಂತಹದ್ದೇ ಸುಳ್ಳು ಸುದ್ದಿ ಕೋಳಿ, ಮೊಟ್ಟೆ ಮಾರಾಟಕ್ಕೂ ಬಾಧಕವಾಗಿತ್ತು. ಈ ಎಲ್ಲವು ಆರೋಗ್ಯಕ್ಕೆ ಒಳ್ಳೆಯ ಪದಾರ್ಥಗಳು. ಇಂತಹ ಸುಳ್ಳು ಸುದ್ದಿಗೆ ಯಾರೂ ಕಿವಿಗೊಡಬಾರದು ಎಂದು ತಿಳಿಸಿದರು.