ಮಡಿಕೇರಿ ನಗರದಲ್ಲಿ ವಾಹನ ಸಂಚಾರ, ನಿಲುಗಡೆಯಲ್ಲಿ ಮಾರ್ಪಾಡು
ಮಡಿಕೇರಿ, ಎ.9: ಕೊರೋನ ವೈರಸ್ ಸಂಬಂಧ ಮಡಿಕೇರಿ ನಗರದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ಕೆಲವು ಮಾರ್ಪಾಡುಗಳನ್ನು ಮಾಡಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆದೇಶಿಸಿದ್ದಾರೆ.
ಜಿಲ್ಲಾಸ್ಪತ್ರೆಯ ಬದಲಾಗಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಯನ್ನು ಕೋವಿಡ್ಯೇತರ ಸೇವೆಗಳಿಗಾಗಿ ಬಳಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಆಸ್ಪತ್ರೆ ಕಡೆಗೆ ದ್ವಿಮುಖವಾಗಿ ಸಂಚರಿಸುವ ಬದಲು ಮೈಸೂರು ರಸ್ತೆಯ ಈಸ್ಟ್ ಎಂಡ್ ಹೋಟೆಲ್ ಬಳಿಯಿಂದ ಅಶ್ವಿನಿ ಆಸ್ಪತ್ರೆ ಮಾರ್ಗವಾಗಿ ಹೋಗಿ ಶಾಂತಿನಿಕೇತನ ಮಾರ್ಗವಾಗಿ ಹಿಂತಿರುಗಬೇಕು ಎಂದು ಅವರು ಆದೇಶಿಸಿದ್ದಾರೆ.
ಮಡಿಕೇರಿ ನಗರದ ಕಾಲೇಜು ರಸ್ತೆಯ ಇಂದಿರಾಗಾಂಧಿ ವೃತ್ತದಿಂದ ರಾಮ ಮಂದಿರದವರೆಗೆ ರಸ್ತೆಯ ಎಡ ಭಾಗದ ಬದಲಾಗಿ ಬಲ ಭಾಗದಲ್ಲಿ ಲಘು ವಾಹನಗಳ ನಿಲುಗಡೆ ಮಾಡುವುದಲ್ಲದೆ, ಕಾಲೇಜು ರಸ್ತೆಯ ಶಾಂತಿ ಕಾಫಿ ವರ್ಕ್ಸ್ ಮುಂಭಾಗದಿಂದ ಮೋರ್ ಮಳಿಗೆವರೆಗೆ ದ್ವಿಚಕ್ರ ವಾಹನ ನಿಲುಗಡೆಗೆ ಮಾತ್ರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದಾರೆ.