ಡಿಎಚ್ಎಫ್ಎಲ್ ಪ್ರವರ್ತಕರಿಗೆ ಲಾಕ್ ಡೌನ್ ಉಲ್ಲಂಘಿಸಲು ಸಹಾಯ: ಐಪಿಎಸ್ ಅಧಿಕಾರಿಗೆ ಕಡ್ಡಾಯ ರಜೆಯ ಸಜೆ
ಕಪಿಲ್ ವಾಧವನ್ (Photo: newsnation)
ಮುಂಬೈ, ಎ.10: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಮಧ್ಯೆ ಮಹಾರಾಷ್ಟ್ರದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ತೀವ್ರ ನಿರ್ಲಕ್ಷ್ಯದ ಪ್ರಕರಣ ಬೆಳಕಿಗೆ ಬಂದಿದೆ.
ಯೆಸ್ ಬ್ಯಾಂಕ್ ಹಗರಣದಲ್ಲಿ ಸಿಲುಕಿಕೊಂಡಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್ಎಫ್ಎಲ್) ನ ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ಕುಟುಂಬಕ್ಕೆ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಸಹಾಯ ಮಾಡಿ ಸಿಕ್ಕಿ ಬಿದ್ದಿದ್ದಾರೆ.
ಆರೋಪಿಗಳಿಗೆ ಸಹಾಯ ಮಾಡಿದ ಮಹಾರಾಷ್ಟ್ರ ಸರ್ಕಾರದ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರಿಗೆ ಕಡ್ಡಾಯ ರಜೆಯ ತೆರಳುವಂತೆ ಸರಕಾರದ ಆದೇಶ ಹೊರ ಬಿದ್ದಿದೆ.
ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರು ವಾಧವನ್ ಕುಟುಂಬದ 23 ಜನರಿಗೆ ಪಾಸ್ ನೀಡಿದ್ದಾರೆ. 5 ವಾಹನಗಳಲ್ಲಿ ವಾಧವನ್ ಕುಟುಂಬವು ಬುಧವಾರ ಸತಾರಾ ಜಿಲ್ಲೆಯ ಮಹಾಬಲೇಶ್ವರಕ್ಕೆ ಪರಾರಿಯಾಗಿದೆ. ಲಾಕ್ಡೌನ್ ಮಧ್ಯೆ ಪ್ರಯಾಣದ ನಿಷೇಧದ ಹೊರತಾಗಿಯೂ ಅವರು ಪ್ರಯಾಣಿಸಿದ್ದರು. ಇದಕ್ಕಾಗಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
ಐಪಿಎಸ್ ಅಧಿಕಾರಿ ಅಮಿತಾಬ್ ಗುಪ್ತಾ ಅವರ ವಿರುದ್ಧ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ಬಾಕಿ ಇದ್ದರೂ, ಕಡ್ಡಾಯ ರಜೆ ಮೇಲೆ ತೆರಳುವಂತೆ ಆದೇಶ ಜಾರಿ ಮಾಡಲಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ್ ಅನಿಲ್ ದೇಶ್ ಮುಖ್ ತಿಳಿಸಿದ್ದಾರೆ.