ಇಡೀ ಬೆಂಗಳೂರು ನಗರ ಸೀಲ್ಡೌನ್ ?: ವದಂತಿಗಳ ಬಗ್ಗೆ ಸ್ಪಷ್ಟನೆ ನೀಡಿದ ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರು, ಎ. 10: ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನ ವೈರಸ್ ಸೋಂಕು ನಿಯಂತ್ರಣ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಇಡೀ ಬೆಂಗಳೂರು ನಗರವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗುತ್ತದೆ ಎಂಬ ವದಂತಿ ಹರಡುತ್ತಿದ್ದು, ಆದರೆ ಇದು ಸುಳ್ಳು ಸುದ್ದಿ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸ್ಪಷ್ಟನೆ ನೀಡಿದ್ದಾರೆ.
ಮೊದಲ ಹಂತವಾಗಿ ಇಲ್ಲಿನ ಪಾದರಾಯನಪುರ, ಬಾಪೂಜಿ ನಗರ ವಾರ್ಡ್ ಗಳನ್ನು ಸೀಲ್ಡೌನ್ ಮಾಡಲಾಗಿದೆ. ಇದರ ಬೆನ್ನಲ್ಲೆ ಇಡೀ ಬೆಂಗಳೂರು ನಗರವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗುತ್ತದೆ ಎಂಬ ಸುದ್ದಿ ಹರಡುತ್ತಿದೆ. ಈ ಬಗ್ಗೆ ಸ್ಪಷ್ಟಣೆ ನೀಡಿರುವ ಭಾಸ್ಕರ್ ರಾವ್ ಅವರು, 'ಇದು ಸುಳ್ಳು. ಲಾಕ್ಡೌನ್ ಹಿನ್ನೆಲೆಯಲ್ಲಿ ಕೊರೋನ ವೈರಸ್ ಸೋಂಕು ತಡೆಗಟ್ಟಲು ಇಡೀ ಬೆಂಗಳೂರು ಸೀಲ್ಡೌನ್ ಮಾಡುವುದಿಲ್ಲ. ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿ ಕೊಡಬಾರದು. ಅಂತಹದ್ದು ಏನೂ ಇಲ್ಲ. ಯಾವುದೇ ಕಾರಣಕ್ಕೂ ಆತಂಕಪಡಬೇಡಿ, ಎಲ್ಲರೂ ನಿಮ್ಮ ಮನೆಗಳಲ್ಲಿಯೇ ಶಾಂತವಾಗಿರಿ' ಎಂದು ಮನವಿ ಮಾಡಿದ್ದಾರೆ.