ಲಾಕ್ ಡೌನ್ ನಿಂದ ಕಾರಲ್ಲೇ 21 ದಿನಗಳ ಹೀನಾಯ ಜೀವನ
ಗುಜರಾತ್-ಮಹಾರಾಷ್ಟ್ರ ಗಡಿಯಲ್ಲಿ ಸಿಲುಕಿರುವ ಪುತ್ತೂರಿನ ಯುವಕರು
ಭಾರತ ಲಾಕ್ ಡೌನ್ ಆಗುವ 2 ದಿನಗಳ ಮೊದಲು ಗುಜರಾತಿನ ರಾಜ್ ಕೋಟಿನಿಂದ ನಿಸ್ಸಾನ್ ಮೈಕ್ರಾ ಕಾರಿನಲ್ಲಿ ಹೊರಟ ಪುತ್ತೂರಿನ ಇಬ್ಬರು ಯುವಕರು ಗುಜರಾತ್-ಮಹಾರಾಷ್ಟ್ರ ಗಡಿ ಪ್ರದೇಶ ಗುಜರಾತಿನ ವಲ್ಸಾಡ್ ಜಿಲ್ಲೆಯ ಅಂಬರ್'ಗಾವ್ ಭಿಲಾಡ್ ತಾಲೂಕಿನ ಆರ್.ಟಿ.ಒ. ಚೆಕ್ ಪೋಸ್ಟ್ ಬಳಿ ಸಿಲುಕಿದ್ದಾರೆ. ವಾಪಸ್ ರಾಜ್ ಕೋಟಿಗೆ ಹೋಗಲಾಗದೇ ಈಕಡೆ ಪುತ್ತೂರಿಗೂ ಬರಲಾಗದೆ ಕಳೆದ 21 ದಿವಸ ದಾರಿಬದಿ ಕಾರಿನಲ್ಲೇ ಉಳಿಯುವ ಹೀನಾಯ ಪರಿಸ್ಥಿತಿ ಎದುರಾಗಿದೆ.
ಲಾಕ್ ಡೌನ್ ಘೋಷಣೆಯಾಗುವ ಮೊದಲು ರಾಜ್ ಕೋಟ್ ನಿಂದ ಕಾರಿನಲ್ಲಿ ಹೊರಟ ಪುತ್ತೂರು ತಾಲೂಕು ಸಾಮೆತ್ತಡ್ಕದ ಆಶಿಕ್ ಹುಸೈನ್ ಹಾಗೂ ಅವರ ಸ್ನೇಹಿತ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಮುಹಮ್ಮದ್ ತಾಕೀನ್ ಮರೀಲ್ ಸುಮಾರು 500 ಕಿ.ಮೀ.ಗೂ ಅಧಿಕ ಪ್ರಯಾಣಿಸಿದ ಬಳಿಕ ಲಾಕ್ ಡೌನ್ ನ ಅಡಕತ್ತರಿಗೆ ಸಿಲುಕಿದ್ದಾರೆ.
ಆಶಿಕ್ ಹುಸೈನ್ ಅಡಕೆ ವ್ಯಾಪಾರದ ಉದ್ದೇಶದಿಂದ ಹಾಗೂ ರಾಜ್ ಕೋಟ್ ನಲ್ಲಿ ಹೊಸ ಅಂಗಡಿ ತೆರೆಯುವ ಸಲುವಾಗಿ ಒಂದು ತಿಂಗಳ ಹಿಂದೆ ಸ್ನೇಹಿತನ ಜೊತೆ ತೆರಳಿದ್ದರು. ಆದರೆ ಇದೇ ಸಂದರ್ಭ ಕೊರೋನ ವೈರಸ್ ಹರಡುವಿಕೆಯ ಭೀತಿ ತಲೆದೋರಿದ್ದು ಭಾರತದಾದ್ಯಂತ ಲಾಡ್ ಡೌನ್ ವಿಧಿಸಲಾಯಿತು. ಈ ವೇಳೆ ಊರಿಗೆ ಹೊರಟ ಯುವಕರು ಗುಜರಾತ್-ಮಹಾರಾಷ್ಟ್ರ ಗಡಿಯಲ್ಲಿ ಯಾವ ಕಡೆಯೂ ಪ್ರಯಾಣಿಸಲಾಗದೆ ಸಿಲುಕಿದ್ದಾರೆ. ಕಾರಿನಲ್ಲೇ ವಾಸ ಮಾಡುತ್ತಿರುವ ಇಬ್ಬರು ಯುವಕರ ಕರುಣಾಜನಕ ಕಥೆ ಹೇಳಿತೀರದು. ಸ್ನಾನ ಶೌಚಾಗೃಹಕ್ಕೆ ಹತ್ತಿರದ ಅಂಬರ್ ಹೋಟೆಲಿನವರಲ್ಲಿ ಮನವಿ ಮಾಡಿ ಅವಲಂಬಿಸಿರುವ ಇವರು ಆ ರೆಸ್ಟೋರೆಂಟ್ ನಲ್ಲಿ ಸ್ಥಳ ಇಲ್ಲದ ಕಾರಣ ಕಾರಿನಲ್ಲೇ ಮಲಗುವ ಪರಿಸ್ಥಿತಿ ಎದುರಾಗಿದೆ. ದಿನದ ಮೂರು ಹೊತ್ತು ಸ್ಥಳೀಯ ಸಮಾಜ ಸೇವಕರಾದ ಸಯ್ಯದ್ ಕಶ್ಯಪ್ ಎಂಬವರು ಆಹಾರ ನೀಡುತ್ತಿದ್ದಾರೆ. ತುರ್ತು ಅಗತ್ಯದ ಔಷಧಿಯೂ ವಿತರಿಸುತ್ತಾರೆ. ಯುವಕರು ಪುತ್ತೂರಿಗೆ ಬರಲು ಕೆಲವರನ್ನು ಸಂಪರ್ಕಿಸಿ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.
ನಮ್ಮ ಕರ್ನಾಟಕ ಸರಕಾರ, ದ.ಕ. ಜಿಲ್ಲಾಡಳಿತ ಈ ಬಗ್ಗೆ ಮಾನವೀಯತೆ ಮೆರೆದು ಆ ಯುವಕರನ್ನು ಊರಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕಿದೆ. ಗುಜರಾತಿನ ವಲ್ಸಾಡ್ ಜಿಲ್ಲಾಡಳಿತವನ್ನು ಸಂಪರ್ಕಿಸಿ ಪುತ್ತೂರಿಗೆ ಕರೆಸಲು ಸರಕಾರಕ್ಕೆ, ಜಿಲ್ಲಾಡಳಿತಕ್ಕೆ ಅಸಾಧ್ಯವಾದುದೇನಲ್ಲ. ಇಲ್ಲಿನ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನಸ್ಸಿದ್ದರೆ ವಿಶೇಷ ಸಮಸ್ಯೆ ಎಂದು ಪರಿಗಣಿಸಿ ಕರೆತರಲು ಖಂಡಿತಾ ಸಾಧ್ಯವಿದೆ. ತಮಿಳುನಾಡಿನ ಮಧುರೈ ಎಸಿ ಅವರು (ಅಬಕಾರಿ) ಮಹಾರಾಷ್ಟ್ರದ ಟಸ್ಗಾಂವ್ ಗೆ ತೆರಳಲು ಇಬ್ಬರಿಗೆ ಎ.8ರಂದು ವಾಹನ ಪಾಸ್ ನೀಡಿದ್ದು ಪುರಾವೆಯಿದೆ. ಅವರು ಮಹಾರಾಷ್ಟ್ರ ತಲುಪಿದ್ದಾರೆ ಕೂಡಾ. ಇಟಲಿಯಿಂದ ಬೆಂಗಳೂರಿಗೆ ಬಂದು ಸಿಲುಕಿದ್ದ ಮಂಗಳೂರಿನ ಯುವತಿಯನ್ನು ಶಾಸಕರಾದ ಯು.ಟಿ.ಖಾದರ್ ಮಂಗಳೂರಿನ ಅವರ ಮನೆ ತಲುಪಿಸಿದ್ದನ್ನು ಕೂಡಾ ಇಲ್ಲಿ ಸ್ಮರಿಸಬಹುದು. ಇಂತಹ ಉದಾಹರಣೆಗಳು ಹಲವಾರು ಇವೆ. ನಮ್ಮ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೂಡಾ ಪುತ್ತೂರಿನ ಈ ಇಬ್ಬರು ಯುವಕರ ಸಮಸ್ಯೆಯನ್ನು ಅರಿತು ತಕ್ಷಣ ಸ್ಪಂದಿಸುವ ಅನಿವಾರ್ಯತೆ ಇದೆ.