ಬಾಡಿಗೆ ಕಟ್ಟಲಾಗದೇ ಆತಂಕದಲ್ಲಿ ಬಸ್-ರೈಲು ನಿಲ್ದಾಣಗಳ ಅಂಗಡಿ ಮಾಲಕರು
ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.20: ಕೊರೋನ ಹಿನ್ನೆಲೆಯಲ್ಲಿ ರಾಜ್ಯದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿನ ವ್ಯಾಪಾರಿಗಳಿಗೂ ಸಂಕಷ್ಟ ತಂದೊಡ್ಡಿದ್ದು, ಕಳೆದ ಒಂದೂವರೆ ತಿಂಗಳಿನಿಂದ ವ್ಯಾಪಾರ ನಡೆದಿಲ್ಲ. ಇಂತಹ ಸಂದರ್ಭದಲ್ಲಿ ಅಂಗಡಿ, ಮಳಿಗೆ, ಹೊಟೇಲ್ಗಳ ಬಾಡಿಗೆ ಕಟ್ಟಬೇಕಿಲ್ಲ ಎಂಬ ಚಿಂತೆ ವ್ಯಾಪಾರಿಗಳನ್ನು ಕಾಡಲು ಶುರು ಮಾಡಿದೆ.
ಬಾಡಿಗೆ ಮನ್ನಾ ವಿಚಾರವಾಗಿ ಈವರೆಗೂ ರೈಲು ಇಲಾಖೆ ಹಾಗೂ ಕೆಎಸ್ಸಾರ್ಟಿಸಿ, ಈಶಾನ್ಯ ಸಾರಿಗೆ ಸೇರಿದಂತೆ ಯಾರೊಬ್ಬರೂ ಸ್ಪಷ್ಟವಾದ ನಿರ್ಧಾರ ಕೈಗೊಂಡಿಲ್ಲ. ಆದರೆ ಅಂಗಡಿಗಳ ಮಾಲಕರಿಗೂ ಈ ಬಗ್ಗೆ ಕರೆ ಮಾಡಿ ಬಾಡಿಗೆ ಕಟ್ಟುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಅಧಿಕಾರಿಗಳ ಹೇಳಿಕೆಯಿಂದ ವಿಚಲಿತಗೊಂಡಿರುವ ಅಂಗಡಿಗಳ ಮಾಲಕರು ಆತಂಕಕ್ಕೆ ಒಳಗಾಗಿದ್ದಾರೆ. ರಾಜ್ಯದಲ್ಲಿ ಸುಮಾರು ಒಂದು-ಎರಡು ತಿಂಗಳುಗಳಿಂದ ಸರಿಯಾದ ವ್ಯಾಪಾರ ನಡೆದಿಲ್ಲ. ಅಲ್ಲದೆ, ಲಾಕ್ಡೌನ್ ಮುಗಿದ ನಂತರವೂ ಸಂಪೂರ್ಣ ಪ್ರಮಾಣದಲ್ಲಿ ವ್ಯಾಪಾರ ಆಗುತ್ತದೆ ಎಂಬ ಭರವಸೆಯೂ ಇಲ್ಲದಂತಾಗಿದೆ ಎಂಬ ಆತಂಕದ ಮಾತುಗಳನ್ನಾಡುತ್ತಿದ್ದಾರೆ ಅಂಗಡಿಗಳ ಮಾಲಕರು.
ರಾಜ್ಯದ ಎಲ್ಲ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಎಲ್ಲ ಅಂಗಡಿಗಳನ್ನು ಮುಚ್ಚಲಾಗಿದೆ. ವಿವಿಧ ಮಳಿಗೆಗಳು, ಅಂಗಡಿಗಳು, ಹೊಟೇಲ್, ಶೌಚಾಲಯ, ಮಿಲ್ಕ್ಬಾರ್, ಮೂತ್ರಾಲಯ, ಪುಸ್ತಕ ಅಂಗಡಿಗಳ ಮಳಿಗೆ ವ್ಯಾಪಾರಿಗಳೂ ಕೂಡ ಖಾಲಿ ಕುಳಿತಿದ್ದಾರೆ.
ಕರ್ನಾಟಕದಾದ್ಯಂತ 10 ಸಾವಿರಕ್ಕೂ ಅಧಿಕ ಅಂಗಡಿ ಮಳಿಗೆಗಳಿವೆ. ಇವುಗಳ ಆದಾಯ ರೈಲು ಹಾಗೂ ಸಾರಿಗೆ ಇಲಾಖೆಗೆ ಮಾಸಿಕ 500 ಕೋಟಿಗೂ ಅಧಿಕವಿದೆ. ಆದರೆ, ಈಗ ಲಾಕ್ಡೌನ್ ಪರಿಣಾಮದಿಂದಾಗಿ ಎಲ್ಲವೂ ಮುಚ್ಚಿರುವುದರಿಂದ ಈ ಬಾರಿ ಅಂಗಡಿಗಳ ಬಾಡಿಗೆ ಕಟ್ಟಲು ಅಸಾಧ್ಯ ಎಂಬ ಮಾತುಗಳು ಮಾಲಕರು ವ್ಯಕ್ತಪಡಸಿದ್ದಾರೆ.
'ಮಾರ್ಚ್ ಹಾಗೂ ಎಪ್ರಿಲ್ ತಿಂಗಳಲ್ಲಿ ಬಿಡಿಗಾಸಿನ ಲಾಭ ಕೂಡ ಸಾಧ್ಯವಾಗಿಲ್ಲ. ಕುಟುಂಬ ಸಲಹುವುದೇ ದುಸ್ತರವಾಗಿದೆ. ಇನ್ನು ಬಾಡಿಗೆ ವಸೂಲಿಗೆ ನಿಂತರೆ ಗತಿ ಏನು?' ಎಂಬುದು ಬಸ್ ನಿಲ್ದಾಣ ವ್ಯಾಪಾರಿಗಳ ಗೋಳು.
ಒಂದು ತಿಂಗಳ ಮುಂಚೆಯೇ ವಸೂಲಿ: ನಿಯಮದ ಪ್ರಕಾರ ರೈಲು ಅಥವಾ ಸಾರಿಗೆ ಸಂಸ್ಥೆ ಪ್ರತಿ ಮಳಿಗೆಯನ್ನು ಹರಾಜಿನ ಮೂಲಕ ನೀಡುತ್ತದೆ. ಬಾಡಿಗೆಯನ್ನು ಒಂದು ತಿಂಗಳ ಮುಂಚೆಯೇ ಪಡೆಯುತ್ತದೆ. ಅದನ್ನು ಆಯಾ ತಿಂಗಳ 7ರ ಒಳಗಾಗಿ ಕಟ್ಟಬೇಕು. 5 ವರ್ಷದವರೆಗೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ.
ಹಳೇ ಟೆಂಡರ್ ಪ್ರಕಾರ ಬಾಡಿಗೆ ಮೊತ್ತದ 6 ತಿಂಗಳ ಹಣ ಠೇವಣಿ, ಹೊಸ ಟೆಂಡರ್ನವರಿಗೆ 8 ತಿಂಗಳ ಠೇವಣಿ ಪಡೆಯಲಾಗಿದೆ. ಸದ್ಯ ಈ ಠೇವಣಿಗೆ ಬಿಡಿಗಾಸಿನ ಬಡ್ಡಿ ಕೂಡ ನೀಡುವುದಿಲ್ಲ. ಆದರೆ, ಬಾಡಿಗೆ ನೀಡುವುದನ್ನು ಒಂದು ತಿಂಗಳು ನಿಲ್ಲಿಸಿದರೂ ಸಾಕು ಶೇ. 2ರಷ್ಟು ಬಡ್ಡಿ ಸ್ವೀಕರಿಸುತ್ತಾರೆ. ಮೂರು ತಿಂಗಳ ನಿರಂತರ ಬಾಡಿಗೆ ಕಟ್ಟದಿದ್ದರೆ ಅಂಗಡಿ ಸೀಜ್ ಮಾಡುವುದು ನಿಯಮ.
ನಾನು ಸುಮಾರು ವರ್ಷಗಳಿಂದ ಬೇಕರಿಯನ್ನಿಟ್ಟುಕೊಂಡಿದ್ದೇನೆ. ತಿಂಗಳಿಗೆ 60 ಸಾವಿರ ಬಾಡಿಗೆ ಕಟ್ಟುತ್ತೇನೆ. ಆದರೆ, ಮಾರ್ಚ್ ಹಾಗೂ ಎಪ್ರಿಲ್ನಲ್ಲಿ ಅಂಗಡಿಯ ಬಾಗಿಲನ್ನೇ ತೆಗೆದಿಲ್ಲ. ಮೇ ತಿಂಗಳಲ್ಲಿ ಅಂಗಡಿ ತೆರೆದರೂ ವ್ಯಾಪಾರವಾಗುವ ಭರವಸೆಯಿಲ್ಲ. ಹೀಗಾಗಿ, ನಮ್ಮ ಪರಿಸ್ಥಿತಿಯನ್ನು ಅರಿತುಕೊಂಡು ಮೂರು ತಿಂಗಳಷ್ಟು ಬಾಡಿಗೆಯನ್ನು ಮನ್ನಾ ಮಾಡಬೇಕು.
-ಸತ್ಯನಾರಾಯಣ, ಅಂಗಡಿ ಮಾಲಕ