ಮಗ್ಗಗಳಲ್ಲಿ ದುಡಿಯುವ ಕಾರ್ಮಿಕರ ಬದುಕು ಅತಂತ್ರ
ಬೆಂಗಳೂರು, ಎ.23: ಕೊರೋನ ಲಾಕ್ಡೌನ್ನ ಪರಿಣಾಮದಿಂದಾಗಿ ರಾಜ್ಯಾದ್ಯಂತ ಸಾವಿರಾರು ಸಂಖ್ಯೆಯಲ್ಲಿರುವ ನೂಲು ತೆಗೆಯುವ ಮಗ್ಗಗಳು ಕಾರ್ಯ ನಿಲ್ಲಿಸಿದ್ದು, ಅದರಿಂದಲೇ ಬದುಕು ಕಂಡುಕೊಂಡಿದ್ದ ನೇಕಾರರು, ಸಾವಿರಾರು ಸಂಖ್ಯೆಯ ಮಹಿಳೆಯರ ಬದುಕು ದುಸ್ತರವಾಗಿದೆ.
ಕೊರೋನ ಭೀತಿಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇರುವ ಮಗ್ಗಗಳಲ್ಲಿ ಕೆಲವಷ್ಟೇ ಕೆಲಸ ಮಾಡುತ್ತಿವೆ. ಆದರೆ, ಬಹುತೇಕ ಮಗ್ಗಗಳು ತೀವ್ರ ಸಂಕಷ್ಟದಲ್ಲಿದ್ದು, ಭಾಗಶಃ ಮುಚ್ಚಿ ಹೋಗಿವೆ. ನೇಕಾರಿಕೆ ಉದ್ಯೋಗದಲ್ಲಿ ಒಂದು ಸೀರೆ ಸಿದ್ಧವಾಗಬೇಕಾದರೆ ಏಳೆಂಟು ಜನರು ಪೂರಕ ಉದ್ಯೋಗದಲ್ಲಿ ತೊಡಗಿರುತ್ತಾರೆ. ಮನೆಯ ಮಹಿಳೆಯರೇ ತಮ್ಮ ಮನೆಗೆಲಸ ಮಾಡಿಕೊಂಡು ಈ ಪೂರಕ ಉದ್ಯೋಗದಲ್ಲಿ ತೊಡಗಿರುತ್ತಾರೆ. ಪೂರಕ ಕಾರ್ಯಗಳು ಅವರಿಗೊಂದು ಆರ್ಥಿಕ ಭದ್ರತೆಯನ್ನು ನೀಡುತ್ತದೆ. ಆದರೆ ಕೊರೋನ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ ಆರ್ಥಿಕತೆಗೆ ಹಿನ್ನೆಲೆಯಾಗಿದೆ.
ಸಾರಿಗೆ ಸಂಪರ್ಕ ಸಂಪೂರ್ಣ ನಿಂತು ಹೋಗಿರುವುದರಿಂದ ಕಚ್ಚಾ ನೂಲು, ಬಣ್ಣಗಳ ಪೂರೈಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಚ್ಚಾ ಸರಕುಗಳನ್ನು ಹೊಂದಿದ ಮಾಲಕರ ಮಗ್ಗಗಳು ಮಾತ್ರ ಕಾರ್ಯ ಮಾಡುತ್ತಿವೆ. ಉಳಿದಂತೆ ಎಲ್ಲ ಮಾಲಕರ ಮನೆಯಲ್ಲಿ ಮಗ್ಗಗಳ ಕಾರ್ಯ ನಿಂತಿದೆ.
ನೇಯ್ಗೆಗೆ ಪೂರಕವಾದ ಖಂಡಕಿ, ಚಮಕಾ ಸುತ್ತುವುದು, ವಾಂಡರ್ ಹಾಕುವುದು ನಂತರ ಸೀರೆ ಸಿದ್ಧವಾದ ನಂತರ ಅದನ್ನು ಗಳಿಗೆ ಹಾಕುವುದು, ಸೀರೆಗೆ ಗೊಂಡೆ ಕಟ್ಟುವುದು ಮತ್ತು ಸೀರೆಯ ಮಧ್ಯದಲ್ಲಿರುವ ಬುಟ್ಟಾಗಳನ್ನು ಅತ್ಯಂತ ಕಾಳಜಿಯಿಂದ ಸುಡುವ ಕಾರ್ಯವನ್ನು ಮಹಿಳೆಯರೆ ಮಾಡುತ್ತಾರೆ. ನೇಕಾರಿಕೆಯ ಉದ್ಯೋಗವೇ ನಿಂತಿದ್ದರಿಂದ ಈ ಎಲ್ಲ ಮಹಿಳೆಯರು ಈಗ ಅತಂತ್ರರಾಗಿದ್ದಾರೆ.
ನಾವು ಒಂದು ದಿನಕ್ಕೆ ಅಂದಾಜು 350ಕ್ಕಿಂತಲೂ ಹೆಚ್ಚು ಸೀರೆಗಳ ಗಳಿಗೆಯನ್ನು ಹಾಕುತ್ತಿದ್ದೆವು. ಒಂದು ದಿನಕ್ಕೆ ಅಂದಾಜು 500-600 ರೂ.ಗಳೂ ಕೂಲಿಯಾಗುತ್ತಿತ್ತು. ಆದರೆ ಈಗ ದಿನಕ್ಕೆ ಮೂವತ್ತರಿಂದ ನಲವತ್ತು ಸೀರೆಗಳು ಮಾತ್ರ ಬರುತ್ತಿವೆ. ಎಂಟು ಜನರ ಕುಟುಂಬ ನಮ್ಮದು. ದಿನಕ್ಕೆ 100 ಕೂಲಿ ದೊರೆಯುತ್ತಿಲ್ಲ. ನಮ್ಮ ಮನೆಯಲ್ಲಿಯ ಐದು ಜನ ಮಹಿಳೆಯರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ನೇಕಾರ ಬಸಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ 10 ಸಾವಿರಕ್ಕೂ ಅಧಿಕ ಮಗ್ಗಗಳಿದ್ದು, ಇವುಗಳನ್ನು ಆಧರಿಸಿಕೊಂಡು 2 ಲಕ್ಷಕ್ಕೂ ಅಧಿಕ ಜನರು ಜೀವನವನ್ನು ಕಟ್ಟಿಕೊಂಡಿದ್ದಾರೆ. ಆದರೆ, ಲಾಕ್ಡೌನ್ ಪರಿಣಾಮದಿಂದಾಗಿ ಕೂಲಿ ಕೆಲಸ ಮಾಡುತ್ತಿದ್ದವರ ಬದುಕಿನ ಮೇಲೆ ಭೀಕರ ಪರಿಣಾಮ ಬೀರಿದೆ.
ಕೊರೋನ ಪ್ರಕರಣಗಳು ಅಧಿಕವಾಗುತ್ತಲೇ ಇವೆ. ಇದೇ ಪರಿಸ್ಥಿತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಎಲ್ಲ ಮಗ್ಗಗಳ ಕಾರ್ಯ ನಿಲ್ಲುತ್ತದೆ. ಈ ಮಗ್ಗಗಳ ಕಾರ್ಯ ಸ್ಥಗಿತಗೊಂಡರೆ ನೇಕಾರಿಕೆಯನ್ನು ಅವಲಂಬಿಸಿದ ಸಾವಿರಾರು ಕಾರ್ಮಿಕರ ಬದುಕು ಅತಂತ್ರವಾಗಲಿದೆ.
-ಜಯನರಸಿಂಹ, ನೇಕಾರರು
ಕೊರೋನ ವೈರಸ್ ಹಿನ್ನೆಲೆಯಲ್ಲಿ ನೇಕಾರರು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು, ಜೀವನ ನಡೆಸಲು ಕಷ್ಟಕರವಾಗುತ್ತಿದೆ. ನೇಕಾರರ ನೆರವಿಗೆ ರಾಜ್ಯ ಸರಕಾರ ಮುಂದಾಗಿದೆ. ನೇಕಾರರು ಸಿದ್ಧಪಡಿಸಿದ ಸೀರೆ ಹಾಗೂ ಇತರ ಉಡುಪುಗಳನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಕೂಡಲೇ ನೇರವಾಗಿ ಖರೀದಿಸಿ, ಕೂಲಿಯನ್ನು ಪಾವತಿಸುವ ಮೂಲಕ ನೆರವಾಗಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಲಾಗಿದೆ.
-ಗೋವಿಂದ ಎಂ.ಕಾರಜೋಳ, ಉಪಮುಖ್ಯಮಂತ್ರಿ