ಕಿರುತೆರೆ ಕಲಾವಿದರಿಗೂ ಸಂಕಷ್ಟ ತಂದಿಟ್ಟ ಲಾಕ್ಡೌನ್ ಎಫೆಕ್ಟ್
ಬೆಂಗಳೂರು, ಮೇ 4: ರಾಜ್ಯದಲ್ಲಿ ಮೇ 17 ರವರೆಗೂ ಲಾಕ್ಡೌನ್ ಮುಂದುವರಿಸಿರುವುದರ ಪರಿಣಾಮ ಕಿರುತೆರೆ ಕಲಾವಿದರು ಕಂಗಾಲಾಗಿದ್ದು, ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದವರ ಜೀವನದ ಮೇಲೆ ಇದೀಗ ಕರಿಛಾಯೆ ಮೂಡಲಾರಂಭಿಸಿದೆ.
ಲಾಕ್ಡೌನ್ಗೂ ಮೊದಲು ಕನ್ನಡದ ಹಲವು ಖಾಸಗಿ ಚಾನೆಲ್ಗಳಲ್ಲಿ ಸಾಕಷ್ಟು ಧಾರಾವಾಹಿ, ರಿಯಾಲಿಟಿ ಶೋ ಹೀಗೆ ಅನೇಕ ಕಾರ್ಯಕ್ರಮಗಳು ಪ್ರಸಾರವಾಗುತ್ತಿದ್ದವು. ಈ ಪೈಕಿ ಕೆಲವೊಂದು ಧಾರಾವಾಹಿಗಳಂತೂ ಟಿಆರ್ಪಿಯಲ್ಲಿ ಮೇಲ್ಮಟ್ಟದಲ್ಲಿದ್ದವು. ಆದರೆ, ಇದೀಗ ಲಾಕ್ಡೌನ್ನಿಂದಾಗಿ ಒಂದು ತಿಂಗಳಿನಿಂದ ಧಾರಾವಾಹಿಗಳ, ರಿಯಾಲಿಟಿ ಶೋಗಳ ಹೊಸ ಕಂತುಗಳು ಪ್ರಸಾರವಾಗಿಲ್ಲ.
ಮೇ 3 ರ ನಂತರ ಲಾಕ್ಡೌನ್ ತೆರವು ಆದ ಬಳಿಕ ಸುಧಾರಿಸಿಕೊಳ್ಳಬಹುದು ಎಂದುಕೊಂಡಿದ್ದ ಕಿರಿತೆರೆಯ ಆಸೆಯ ಮೇಲೆ ತಣ್ಣೀರು ಬಟ್ಟೆ ಹಾಕಿದಂತಾಗಿದೆ. ಅಲ್ಲದೆ, ಧಾರಾವಾಹಿಗಳನ್ನು ಈಗ ಹೊಸದಾಗಿ ಚಿತ್ರೀಕರಣ ಮಾಡಿ, ಪ್ರಸಾರ ಮಾಡುವುದು ಕಷ್ಟದ ಕೆಲಸ ಮತ್ತು ವೀಕ್ಷಕರನ್ನು ಮತ್ತೆ ಟಿವಿ ಮುಂದೆ ಕೂರಿಸುವುದಂತೂ ಸವಾಲಿನ ಕೆಲಸವಾಗಿದೆ.
ಈಗಾಗಲೇ ಹಳೆಯದ್ದನ್ನೆಲ್ಲಾ ಜನ ಮರೆತು ಹೋಗಿರುತ್ತಾರೆ. ಅದಕ್ಕೆ ಒಂದಿಷ್ಟು ಸಮಯ ಮೀಸಲಿಡಬೇಕು. ಕಥೆಯನ್ನು ಮೆಲುಕು ಹಾಕಿದ ನಂತರವಷ್ಟೇ ಹೊಸ ಕಂತುಗಳನ್ನು ಪ್ರಸಾರ ಮಾಡಬೇಕು. ಆಗಷ್ಟೇ ಜನರನ್ನು ಸೆಳೆಯಲು ಸಾಧ್ಯವಾಗುತ್ತದೆ. ಅನಂತರ ಜನರು ಎಂದಿನಂತೆಯೇ ನೋಡಲು ಆರಂಭಿಸುತ್ತಾರೆ.
ಈಗ ಕಿರುತೆರೆ ಮಂದಿ ತಲೆ ಕೆಡಿಸಿಕೊಂಡಿರುವುದೇ ಆ ವಿಚಾರಕ್ಕಾಗಿ. ಪ್ರಮುಖವಾಗಿ ಲಾಕ್ಡೌನ್ ಮುಗಿದ ನಂತರ ಧಾರಾವಾಹಿಯನ್ನು ಹೇಗೆ ಮತ್ತು ಎಲ್ಲಿಂದ ಪ್ರಸಾರ ಮಾಡಬೇಕು ಎಂದು ಎಲ್ಲರಿಗೂ ತಲೆ ನೋವಾಗಿ ಪರಿಣಮಿಸಿದೆ. ಏಕೆಂದರೆ ಎಲ್ಲ ಧಾರಾವಾಹಿಗಳ ಕಥೆ ಮುಗಿದ ಮೇಲೂ ಅದೇ ವೇಗ ಮುಂದುವರಿಯುತ್ತದೆಯಾ ಎಂಬ ಅನುಮಾನ ಕಾಡುತ್ತಿದೆ.
ಲಾಕ್ಡೌನ್ ಪರಿಣಾಮ ಜನ ಧಾರಾವಾಹಿಗಳನ್ನು ನೋಡುವುದನ್ನು ಮರೆತಿದ್ದಾರೆ. ಈಗ ಏಕಾಏಕಿ ಧಾರಾವಾಹಿಗಳ ಮುಂದುವರೆದ ಭಾಗವನ್ನಷ್ಟೇ ಪ್ರಸಾರ ಮಾಡಿದರೆ ಅದನ್ನು ಜನ ನೋಡುತ್ತಾರೆಯಾ ಎಂಬುದು ತಿಳಿದಿಲ್ಲ. ನಮ್ಮ ಧಾರಾವಾಹಿ ಜೊತೆಜೊತೆಯಲಿ ಪೀಕ್ನಲ್ಲಿತ್ತು. ಆದರೆ, ಇನ್ನು ಒಂದೆರಡು ತಿಂಗಳುಗಳ ಕಾಲ ಅದನ್ನು ನಿಭಾಯಿಸುವುದೇ ಸವಾಲಿನ ಕೆಲಸವಾಗಿದೆ. ಈಗ ನಾವು ಶೂನ್ಯದಿಂದ ಆರಂಭಿಸಿ, ಕಥೆ ಎಲ್ಲಿಗೆ ನಿಂತಿದೆಯೋ ಅಲ್ಲಿಂದಲೇ ಮುಂದುವರಿಸಬೇಕಾಗುತ್ತದೆ. ಒಟ್ಟಾರೆ ಹೊಸ ಧಾರಾವಾಹಿಯಂತೆ ಬಿಂಬಿಸಬೇಕಿದೆ ಎಂದು ಜೊತೆಜೊತೆಯಲಿ ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್ ನುಡಿದಿದ್ದಾರೆ.
ಜನರನ್ನು ಟಿವಿ ಮುಂದೆ ಕೂರಿಸುವುದು ಒಂದು ಸವಾಲಾದರೆ, ಚದುರಿ ಹೋಗಿರುವ ಕಲಾವಿದರನ್ನು ಒಂದುಕಡೆ ಸೇರಿಸುವುದು ಮತ್ತೊಂದು ಸುತ್ತಿನ ಸವಾಲಿನ ಕೆಲಸವಾಗಿದೆ. ಲಾಕ್ಡೌನ್ನಿಂದ ಕಿರುತೆರೆ ಕಲಾವಿದರು ಸಾಕಷ್ಟು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.
ಲಾಕ್ಡೌನ್ನಿಂದಾಗಿ ಸ್ಥಗಿತಗೊಂಡಿರುವ ಸಿನಿಮಾ ಮತ್ತು ಧಾರಾವಾಹಿ ಶೂಟಿಂಗ್ಗಳಿಗೆ ಸರಕಾರ ಅನುಮತಿ ನೀಡುತ್ತದೆಯೋ ಇಲ್ಲವೋ ಎನ್ನುವುದು ಮಂಗಳವಾರ ತಿಳಿಯಲಿದೆ. ಸಿನಿಮಾ, ಧಾರಾವಾಹಿ ಶೂಟಿಂಗ್ ಯಾವಾಗ ಮಾಡಬಹುದು ಎಂದು ನಾಳೆ ಸಿಎಂ ಜೊತೆ ಚರ್ಚೆ ಮಾಡಿ ಹೇಳುತ್ತೇವೆ.
-ಆರ್.ಅಶೋಕ್, ಕಂದಾಯ ಸಚಿವ