ಭಾರತದ ವೈರಸ್ ಚೀನಾ, ಇಟಲಿ ವೈರಸ್ಗಿಂತ ಹೆಚ್ಚು ಮಾರಣಾಂತಿಕ: ನೇಪಾಳ ಪ್ರಧಾನಿಯ ಆಘಾತಕಾರಿ ಹೇಳಿಕೆ
“ನಮ್ಮ ದೇಶದಲ್ಲಿ ವೈರಸ್ ಹರಡಲು ಭಾರತೀಯರು ಕಾರಣ” ಎಂದ ಕೆ. ಪಿ. ಶರ್ಮ
ಕಾಠ್ಮಂಡು: ಭಾರತದ ವಿವಾದಿತ ಮೂರು ಭೂ ಪ್ರದೇಶಗಳನ್ನು ತನ್ನದೆಂದು ಹೇಳಿಕೊಂಡು ತನ್ನ ಭೂಪಟದಲ್ಲಿ ನೇಪಾಳ ತಂದಿರುವ ಬದಲಾವಣೆಯನ್ನು ಸಮರ್ಥಿಸಿಕೊಂಡ ಬೆನ್ನಲ್ಲೇ ಅಲ್ಲಿನ ಪ್ರಧಾನಿ ಕೆ ಪಿ ಶರ್ಮ ಓಲಿ ಭಾರತಕ್ಕೆ ಇನ್ನೊಂದು ಆಘಾತ ನೀಡಿದ್ದಾರೆ.
ಭಾರತದ ವೈರಸ್, ಚೀನೀ ಅಥವಾ ಇಟಲಿಯ ವೈರಸ್ಗಿಂತ ಹೆಚ್ಚು ಮಾರಣಾಂತಿಕವಾಗಿ ತೋರುತ್ತಿದೆ ಎಂದು ತಮ್ಮ ದೇಶದ ಸಂಸತ್ತನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದ ಅವರು, ತಮ್ಮ ದೇಶದಲ್ಲಿ ಕೊರೋನವೈರಸ್ ಪ್ರಕರಣಗಳಿಗೆ ಭಾರತವನ್ನು ದೂರಿದ್ದಾರೆ.
“ಅಕ್ರಮವಾಗಿ ಭಾರತದ ಮೂಲಕ ನೇಪಾಳಕ್ಕೆ ಆಗಮಿಸುವವರು ನಮ್ಮ ದೇಶದಲ್ಲಿ ಈ ವೈರಸ್ ಹರಡುತ್ತಿದ್ದಾರೆ, ಕೆಲ ಸ್ಥಳೀಯ ಪ್ರತಿನಿಧಿಗಳು ಹಾಗೂ ಪಕ್ಷ ನಾಯಕರು ಸೂಕ್ತ ಪರೀಕ್ಷೆ ನಡೆಸದೆ ಭಾರತದಿಂದ ಜನರನ್ನು ಕರೆತಂದಿದ್ದಕ್ಕೆ ಜವಾಬ್ದಾರರು'' ಎಂದು ತಮ್ಮ ಇಂದಿನ ಭಾಷಣದಲ್ಲಿ ಅವರು ಹೇಳಿದ್ದಾರೆ.
“ಹೊರಗಿನಿಂದ ಬರುತ್ತಿರುವ ಜನರಿಂದಾಗಿ ಕೋವಿಡ್-19 ಹತ್ತಿಕ್ಕಲು ಹೆಚ್ಚು ಕಷ್ಟವಾಗುತ್ತಿದೆ. ಭಾರತೀಯ ವೈರಸ್ ಚೀನೀ ಹಾಗೂ ಇಟಲಿ ವೈರಸ್ಗಿಂತ ಮಾರಣಾಂತಿಕವಾಗಿ ಕಾಣುತ್ತಿದೆ, ಹೆಚ್ಚು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ'' ಎಂದರು.
ಭಾರತ ಉದ್ಘಾಟಿಸಿದ ಹೊಸ ರಸ್ತೆಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳ ನಡುವೆ ಕಲಹ ಏರ್ಪಟ್ಟಿದೆ.