5 ಲಕ್ಷ ಕಾರ್ಮಿಕರಿಗೆ ಲಾಕ್ಡೌನ್ ಪರಿಹಾರ ನೀಡಲು ದಿಲ್ಲಿ ಆಡಳಿತಕ್ಕೆ ಹೈಕೋರ್ಟ್ ಆದೇಶ
ಹೊಸದಿಲ್ಲಿ,ಮೇ 21: ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿದಂತೆ ನೋಂದಣಿ ಅವಧಿ ಮುಗಿದಿರುವ ಸುಮಾರು 5 ಲಕ್ಷ ಮಂದಿ ಕಾರ್ಮಿಕರಿಗೆ, ಕೋವಿಡ್-19 ಹಿನ್ನೆಲೆಯಲ್ಲಿ ಘೋಷಿಸಲಾದ ಪರಿಹಾರ ಕಾರ್ಯಕ್ರಮಗಳನ್ನು ಪಡೆಯಲು ಸಾಧ್ಯವಾಗುವಂತಹ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ದಿಲ್ಲಿ ಹೈಕೋರ್ಟ್ ಬುಧವಾರ ದಿಲ್ಲಿ ಸರಕಾರಕ್ಕೆ ಸೂಚಿಸಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ದಿಲ್ಲಿ ಸರಕಾರವು ಪ್ರತಿಯೊಬ್ಬ ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ 5 ಸಾವಿರ ರೂ. ನೀಡುತ್ತಿದೆ.
ಲಾಕ್ಡೌನ್ನಿಂದಾಗಿ ಕಟ್ಟಡ ನಿರ್ಮಾಣ ಕಾರ್ಮಿಕರು ಎದುರಿಸುತ್ತಿರುವ ಬವಣೆಗಳ ಬಗ್ಗೆ ಗಮನಸೆದು ಸಾಮಾಜಿಕ ಕಾರ್ಯಕರ್ತ ಶಿವನ್ ವರ್ಮಾ ವರ ಅರ್ಜಿಯನ್ನು ನ್ಯಾಯಮೂರ್ತಿ ವಿಪಿನ್ ಸಾಂಘಿ ನೇತೃತ್ವದ ನ್ಯಾಯಪೀಠ ವಿಚಾರಣೆಗೆ ಕೈಗೆತ್ತಿಕೊಂಡಿತ್ತು.
2018ರಲ್ಲಿ ಸೆಪ್ಟೆಂಬರ್ 30ರವರೆಗೆ ದಿಲ್ಲಿಲ್ಲಿ 5,39,421 ನೋಂದಾಯಿತ ಕಾರ್ಮಿಕರಿದ್ದರು. ಆದರೆ ನೋಂದಣಿಯ ಸಿಂಧುತ್ವದ ಅವಧಿಯು 2020ರ ಮಾರ್ಚ್ 23ರವರೆಗೆ ಇರುವ ಕೇವಲ 39,600 ಮಂದಿಗಷ್ಟೇ ಹಣಕಾಸಿನ ಸೌಲಭ್ಯವನ್ನು ವರ್ಗಾಯಿಸಲಾಗಿತ್ತು ಮತ್ತು ಈವರೆಗೆ ಒಟ್ಟು 19.08 ಕೋಟಿ ರೂ.ಗಳನ್ನು ವಿತರಿಸಲಾಗಿತ್ತು.