ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆ: ಒಟ್ಟು 42 ಮಂದಿ ಸಾವು
ಇಂದು ಯಾದಗಿರಿಯಲ್ಲಿ 72, ರಾಯಚೂರಿನಲ್ಲಿ 40 ಮಂದಿಗೆ ಪಾಸಿಟಿವ್
ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 23: ರಾಜ್ಯದಲ್ಲಿ ಮತ್ತೆ 216 ಮಂದಿಗೆ ಕೊರೋನ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,959ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶುಕ್ರವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆವೆರೆಗೆ 216 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಮಾಹಿತಿ ನೀಡಲಾಗಿದೆ.
ಈ ಪೈಕಿ ಅತ್ಯಧಿಕ ಪ್ರಕರಣಗಳು ಯಾದಗಿರಿಯಲ್ಲಿ ದೃಢಪಟ್ಟಿದ್ದು, ಇಲ್ಲಿ 72 ಮಂದಿಗೆ ಕೊರೋನ ಪಾಸಿಟಿವ್ ಬಂದಿದೆ. ರಾಯಚೂರಿನಲ್ಲಿ 40, ಮಂಡ್ಯದಲ್ಲಿ 28, ಚಿಕ್ಕಬಳ್ಳಾಪುರದಲ್ಲಿ 26, ಗದಗ 15, ಧಾರವಾಡ 5, ಬೆಂಗಳೂರು ನಗರ 4, ಹಾಸನ 4, ಉಡುಪಿ, ದಾವಣಗೆರೆ, ಬಳ್ಳಾರಿ, ಬೀದರ್, ಕೋಲಾರದಲ್ಲಿ ತಲಾ 3, ಉತ್ತರ ಕನ್ನಡ 2, ದಕ್ಷಿಣ ಕನ್ನಡ 2 , ಕಲಬುರಗಿ ಮತ್ತು ಬೆಳಗಾವಿಯಲ್ಲಿ ತಲಾ ಒಂದು ಪ್ರಕರಣಗಳು ಬೆಳಕಿಗೆ ಬಂದಿದೆ.
ಈ ಮಧ್ಯೆ ರಾಜ್ಯದ ಒಟ್ಟು 1,959 ಸೋಂಕಿತರ ಪೈಕಿ 608 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದುವರೆಗೆ 42 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇಬ್ಬರು ಕೊರೋನ ಸೋಂಕಿತರು ಅನ್ಯ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಬುಲೆಟಿನ್ ತಿಳಿಸಿದೆ.