ರಾಜ್ಯದಲ್ಲಿ ಪಂಚಾಯತ್ ಚುನಾವಣೆ ನಡೆಸುವ ಪರಿಸ್ಥಿತಿ ಇಲ್ಲ: ನಳೀನ್ ಕುಮಾರ್
ಉಡುಪಿ, ಮೇ 25: ಕೋವಿಡ್ -19 ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಂಚಾ ಯತ್ ಚುನಾವಣೆ ನಡೆಸುವ ಪರಿಸ್ಥಿತಿ ಇಲ್ಲ. ಗ್ರಾಪಂಗಳಿಗೆ ಸಮಿತಿ ರಚನೆ ಮಾಡುವ ಬಗ್ಗೆ ಸಚಿವ ಸಂಪುಟ ತೀರ್ಮಾನ ಕೈಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಿತಿ ರಚನೆ ಸಂಬಂಧ ಸರಕಾರ ಎಲ್ಲವನ್ನೂ ಎಲ್ಲರಲ್ಲಿ ಕೇಳಿ ಮಾಡಲು ಆಗುವುದಿಲ್ಲ. ಕಾಂಗ್ರೆಸ್ ಕೂಡ ಸರಕಾರ ನಡೆಸಿದೆ. ಜನರಿಗೆ ಸಮಸ್ಯೆಯಾಗದ ರೀತಿಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕೆಂಬುದು ನಮಗೆ ಗೊತ್ತಿದೆ. ಕೆಲವು ಗ್ರಾಪಂಗೆ ಡಿಸೆಂಬರ್ವರೆಗೆ ಅವಧಿ ಇದೆ. ಅವಧಿ ಮುಗಿದ ಬಳಿಕ ಜಿಲ್ಲಾಧಿಕಾರಿಗಳು ಸಮಿತಿ ನೇಮಕ ಮಾಡುತ್ತಾರೆ ಎಂದರು.
ದೇಶಿಯ ವಿಮಾನಗಳು ಇಂದು ಪ್ರಾರಂಭವಾಗಿವೆ. ಸಾಮಾಜಿಕ ಅಂತರ, ಮುಖ ಕವಚವನ್ನು ಕಡ್ಡಾಯವಾಗಿ ಧರಿಸಿ ಪ್ರಯಾಣ ಮಾಡಲಾಗುತ್ತಿದೆ. ಆರೋಗ್ಯ ತಪಾಸಣೆ ಮಾಡಿ ವಿಮಾನ ಹತ್ತಿಸುತ್ತಾರೆ. ದೇಶಿಯ ವಿಮಾನ ಆರಂಭಿಸುವುದು ಅನಿವಾರ್ಯವಾಗಿದೆ. ಇನ್ನು ಮುಂದೆ ಕೋವಿಡ್ ಜೀವನದ ಒಂದು ಭಾಗವಾಗಲಿದೆ ಎಂದು ಅವರು ತಿಳಿಸಿದರು.
ಹೊರರಾಜ್ಯದಿಂದ ಬಂದವರಿಗೆ ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಮಾಡಲಾಗುತ್ತದೆ. ಇದನ್ನು ಒಪ್ಪಿ ಬರುವವರು ಮಾತ್ರ ವಿಮಾನದಲ್ಲಿ ಬರುತ್ತಾರೆ. ಮುಂಬೈ ಕನ್ನಡಿಗರ ಒತ್ತಡ ಸಹಜವಾಗಿಯೇ ಇದೆ. ಅದೇ ರೀತಿ ರಾಜಕಾರಣಿಗಳನ್ನು ದೂರುವುದು ಕೂಡ ಸಹಜ. ಮುಂಬೈಯಲ್ಲಿ ಇರುವವರು ನಮ್ಮ ಸಹೋದರರು ಆಗಿದ್ದಾರೆ. ಅವರ ಕಷ್ಟಗಳ ಅರಿವು ನಮಗೂ ಇದೆ. ಈಗಿನ ಚಿತ್ರಣ ನೋಡಿದರೆ ಒಂದಿಷ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚಾಗ ಬಹುದು. ಸಮಸ್ಯೆ ಎದುರಿಸಲು ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ ಎಂದರು.