ಹೆಬ್ರಿ ಪೊಲೀಸ್ ಠಾಣೆ ಬಂದ್: ಎಸ್ಸೈ ಸಹಿತ ಎಲ್ಲ ಸಿಬ್ಬಂದಿಗೆ ಕ್ವಾರಂಟೈನ್
ಸೋಮೇಶ್ವರ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಣೆ
ಹೆಬ್ರಿ, ಮೇ 25: ಸೋಮೇಶ್ವರದಲ್ಲಿರುವ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿನ್ನೆಲೆಯಲ್ಲಿ ಹೆಬ್ರಿ ಪೊಲೀಸ್ ಠಾಣೆಯ ಎಸ್ಸೈ ಸೇರಿದಂತೆ ಎಲ್ಲ 32 ಮಂದಿ ಸಿಬ್ಬಂದಿಯನ್ನು ಕ್ವಾರಂಟೇನ್ನಲ್ಲಿ ಇರಿಸಿ, ಠಾಣೆಯನ್ನು ಬಂದ್ ಮಾಡಲಾಗಿದೆ.
ಸೋಮೇಶ್ವರ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಜೆಕಾರು ಸಹಾಯಕ ಪೊಲೀಸ್ ಉಪನಿರೀಕ್ಷಕರಿಗೆ ಮೇ24ರಂದು ಕೊರೋನ ಪಾಸಿಟಿವ್ ಬಂದಿದ್ದು, ಈ ಚೆಕ್ಪೋಸ್ಟ್ನಲ್ಲಿ ಇವರ ಸಂಪರ್ಕಕ್ಕೆ ಬಂದಿರುವ ಹೆಬ್ರಿ ಠಾಣೆಯ 12 ಸಿಬ್ಬಂದಿಗೆ ಸರಕಾರಿ ಮತ್ತು 20 ಸಿಬ್ಬಂದಿಗೆ ಹೋಮ್ ಕ್ವಾರಂಟೇನ್ ವಿಧಿ ಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೆಬ್ರಿ ಠಾಣೆಯನ್ನು ಸಂಪೂರ್ಣ ಬಂದ್ ಮಾಡಿ, ವಾಹನವನ್ನು ಆವರಣ ದೊಳಗೆ ನಿಲ್ಲಿಸಿ, ಮುಖ್ಯಗೇಟಿಗೆ ಬೀಗ ಜಡಿಯಲಾಗಿದೆ. ಅಲ್ಲದೆ ಠಾಣೆಯನ್ನು ತಾತ್ಕಾಲಿಕವಾಗಿ ರಾಮಮಂದಿರಕ್ಕೆ ಸ್ಥಳಾಂತರಿಸಿರುವ ಕುರಿತ ಪೋಸ್ಟರನ್ನು ಠಾಣೆಯ ಕಂಪೌಂಡ್ಗೆ ಹಚ್ಚಲಾಗಿದೆ.
ಸದ್ಯ ಹೆಬ್ರಿ ಠಾಣೆಯು ರಾಮ ಮಂದಿರದಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಿ ಸುತ್ತಿದೆ. ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಆರು ಮಂದಿ ಸಿಬ್ಬಂದಿಯನ್ನು ಇಲ್ಲಿಗೆ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ. ಸೆನ್ ಪೊಲೀಸ್ ಉಪನಿರೀಕ್ಷಕರನ್ನು ಪ್ರಭಾರ ಎಸ್ಸೈ ಆಗಿ ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.
‘ಚೆಕ್ಪೋಸ್ಟ್ನಲ್ಲಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ ಕಾರಣಕ್ಕಾಗಿ ಹೆಬ್ರಿ ಠಾಣೆಯನ್ನು ಸ್ಯಾನಿಟೈಸ್ ಮಾಡಲು ತಾತ್ಕಾಲಿಕವಾಗಿ ರಾಮಮಂದಿರಕ್ಕೆ ಸ್ಥಳಾಂತರಿಸಲಾಗಿದೆ. ಸರಕಾರದ ಮಾರ್ಗಸೂಚಿಯಂತೆ ಸ್ಯಾನಿಟೈಸ್ ಮಾಡಿದ 48 ಗಂಟೆಗಳ ಬಳಿಕ ಠಾಣೆಯನ್ನು ಮತ್ತೆ ತೆರೆಯಲಾಗುತ್ತದೆ’ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ತಿಳಿಸಿದ್ದಾರೆ.
ಹಂತಹಂತವಾಗಿ ಎಲ್ಲ ಠಾಣೆಗಳ ಸ್ಯಾನಿಟೈಸ್
ಕೊರೋನ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಮಾಸೆ ಬೈಲು, ಗಂಗೊಳ್ಳಿ, ಕಾಪು ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಮುಂದೆ ಹಂತಹಂತವಾಗಿ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳನ್ನು ಸ್ಯಾನಿಟೈಸ್ ಮಾಡಲು ಪೊಲೀಸ್ ಇಲಾಖೆ ನಿರ್ಧರಿಸಿದೆ.
ಮೊದಲ ಹಂತವಾಗಿ ಗಡಿಭಾಗದ ಚೆಕ್ಪೋಸ್ಟ್ಗಳಲ್ಲಿ ಕರ್ತವ್ಯ ನಿರ್ವಹಿಸಿ ರುವ ಸಿಬ್ಬಂದಿಗಳು ಸಂಪರ್ಕಿಸಿರುವ ಠಾಣೆಗಳನ್ನು ಸ್ಯಾನಿಟೈಸ್ ಮಾಡಲಾಗು ತ್ತಿದೆ. ಅದೇ ರೀತಿ ನಿಪ್ಪಾಣಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶಂಕರನಾರಾಯಣ ಮತ್ತು ಕುಂದಾಪುರ ಗ್ರಾಮಾಂತರ ಠಾಣಾಧಿಕಾರಿ ಸೇರಿದಂತೆ ಇತರ ಸಿಬ್ಬಂದಿಗೆ ಹೋಮ್ ಕ್ವಾರಂಟೇನ್ ವಿಧಿಸಲಾಗಿದೆ. ಇವರ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.