ಉಡುಪಿ ಎಸ್ಪಿ ಕಚೇರಿ ಸಿಬ್ಬಂದಿಗೆ ಕೋವಿಡ್ : ಸ್ಯಾನಿಟೈಸ್ ಹೊರತು ಕಚೇರಿ ಬಂದ್ ಮಾಡಿಲ್ಲ- ಎಸ್ಪಿ ವಿಷ್ಣುವರ್ದನ್
ಉಡುಪಿ, ಮೇ 25: ಉಡುಪಿ ಎಸ್ಪಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಹೆಡ್ಕಾನ್ಸ್ಟೇಬಲ್ಗೆ ಕೊರೋನ ಪಾಸಿಟಿವ್ ಬಂದಿರುವುದು ದೃಢಪಟ್ಟಿದೆ.
ಬ್ರಹ್ಮಾವರದ 57 ವರ್ಷದ ಇವರು ಕಳೆದ ಹಲವು ಸಮಯಗಳಿಂದ ಎಸ್ಪಿ ಕಚೇರಿಯ ಪ್ರವೇಶದ್ವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಂದು ಬಂದ ವರದಿಯಲ್ಲಿ ಇವರಲ್ಲಿ ಕೊರೋನ ಸೋಂಕು ಕಂಡುಬಂದಿದೆ. ಈ ಮಧ್ಯೆ ಹರಡಿರುವ ವದಂತಿಯ ಹಿನ್ನೆಲೆಯಲ್ಲಿ ಎಸ್ಪಿ, ಕಚೇರಿಯನ್ನು ಬಂದ್ ಮಾಡು ವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
‘ಕಳೆದ ಕೆಲವು ದಿನಗಳಲ್ಲಿ ಪಾಸ್ ಹಾಗೂ ಇತರ ಕೆಲಸಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿರುವ ಹಿನ್ನೆಲೆಯಲ್ಲಿ ಎರಡು ದಿನ ಗಳ ಹಿಂದೆ ಎಸ್ಪಿ ಕಚೇರಿಯನ್ನು ಸ್ಯಾನಿಟೈಸ್ ಮಾಡಲಾಗಿದೆಯೇ ಹೊರತು ಎಸ್ಪಿ ಕಚೇರಿಯನ್ನು ಬಂದ್ ಮಾಡಿಲ್ಲ’ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ದನ್ ಸ್ಪಷ್ಟಪಡಿಸಿದ್ದಾರೆ.
ಡಿಎಆರ್ ಸಿಬ್ಬಂದಿಗೆ ಕೊರೋನ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿಯನ್ನು ಬಂದ್ ಮಾಡಲಾಗಿದೆ ಎಂಬ ವದಂತಿ ಹಬ್ಬಲಾ ಗುತ್ತಿದೆ. ಸಾರ್ವಜನಿಕರ ಭೇಟಿಯ ಹಿನ್ನೆಲೆಯಲ್ಲಿ ನಾವು ಮುಂದೆಯೂ ಕಚೇರಿಯನ್ನು ಸ್ಯಾನಿಟೈಸ್ ಮಾಡುತ್ತೇವೆ. ಆದರೆ ಯಾವುದೇ ಕಾರ ಣಕ್ಕೂ ಕಚೇರಿಯನ್ನು ಬಂದು ಮಾಡುವುದಿಲ್ಲ. ಅದು ಕಾರ್ಯನಿರ್ವಹಿಸುತ್ತಿರುತ್ತದೆ. ಆದುದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯ ಇಲ್ಲ ಎಂದರು.
ಒಂದು ಕಚೇರಿಯಲ್ಲಿ ಹಲವು ಮಂದಿ ಸೋಂಕಿತರು ಕಂಡುಬಂದರೆ ಮಾತ್ರ ಸರಕಾರ ಮಾರ್ಗಸೂಚಿ ಪ್ರಕಾರ ಸೀಲ್ಡೌನ್ ಮಾಡಲು ಅವಕಾಶ ಇರುತ್ತದೆ. ಆದರೆ ನಮ್ಮಲ್ಲಿ ಡಿಎಆರ್ ಸಿಬ್ಬಂದಿಗಳು ಪ್ರವೇಶದ್ವಾರದಲ್ಲಿ ಕರ್ತವ್ಯ ನಿರ್ವಹಿಸಿ ದ್ದಾರೆ ಮತ್ತು ಅವರು ಕನಿಷ್ಟ ಮಂದಿಯನ್ನು ಮಾತ್ರ ಸಂಪರ್ಕ ಮಾಡುತ್ತಾರೆ ಎಂದು ಅವರು ಹೇಳಿದರು.