ಶರ್ಜೀಲ್ ಇಮಾಮ್ ಅಪೀಲು: ನಾಲ್ಕು ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ಹೊಸದಿಲ್ಲಿ : ಸಿಎಎ ವಿರೋಧಿ ಪ್ರತಿಭಟನೆಗಳ ವೇಳೆ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪ ಹೊತ್ತಿರುವ ಜೆಎನ್ಯು ವಿದ್ಯಾರ್ಥಿ ಶರ್ಜೀಲ್ ಇಮಾಮ್, ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ಜತೆಯಾಗಿಸಿ ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿರುವ ಅಪೀಲಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅಸ್ಸಾಂ, ಉತ್ತರ ಪ್ರದೇಶ, ಮಣಿಪುರ್ ಮತ್ತು ಅರುಣಾಚಲ ಪ್ರದೇಶ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿ ಪ್ರತಿಕ್ರಿಯೆ ಕೇಳಿದೆ.
ತಮ್ಮ ವಿರುದ್ಧ ದಿಲ್ಲಿ ಸಹಿತ ಮೇಲಿನ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳು ಒಂದೇ ಭಾಷಣಕ್ಕೆ ಸಂಬಂಧಿಸಿರುವುದರಿಂದ ಜತೆಯಾಗಿಸಿ ಒಂದೇ ಏಜೆನ್ಸಿ ಮೂಲಕ ತನಿಖೆ ನಡೆಸಬೇಕೆಂದು ಜನವರಿ 28ರಂದು ಬಿಹಾರದ ಜೆಹಾನಾಬಾದ್ನಿಂದ ಬಂಧಿತರಾದ ಶರ್ಜೀಲ್ ಇಮಾಮ್ ಕೋರಿದ್ದರು.
ಅವರ ಅಪೀಲಿಗೆ ಪ್ರತಿಕ್ರಿಯಿಸುವಂತೆ ಈ ಹಿಂದೆ ದಿಲ್ಲಿ ಸರಕಾರಕ್ಕೆ ಸೂಚಿಸಿದ್ದ ಜಸ್ಟಿಸ್ ಅಶೋಕ್ ಭೂಷಣ್ ಅವರ ನೇತೃತ್ವದ ನ್ಯಾಯಪೀಠ ಶರ್ಜೀಲ್ ವಿರುದ್ಧ ಎಫ್ಐಆರ್ ದಾಖಲಾಗಿರುವ ನಾಲ್ಕು ಇತರ ರಾಜ್ಯಗಳಿಗೂ ಮಂಗಳವಾರ ನೋಟಿಸ್ ಜಾರಿಗೊಳಿಸಿದೆ.
ದಿಲ್ಲಿ ಸರಕಾರದ ಉತ್ತರ ಸಿದ್ಧವಿದೆ, ಬುಧವಾರದೊಳಗೆ ಸಲ್ಲಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಪ್ರಕರಣದ ವಿಚಾರಣೆಯನ್ನು ಎರಡು ವಾರಗಳ ನಂತರ ನಿಗದಿ ಪಡಿಸಲಾಗಿದೆ.