ಬಿಜೆಪಿಯ ಆಂತರಿಕ ಕಚ್ಚಾಟ ಬಿಎಸ್ವೈಗೆ ಬಿಸಿತುಪ್ಪ: ರಾಜಕೀಯ ಕುತೂಹಲಕ್ಕೆ ಕಾರಣವಾದ 'ಬೆಳಗಾವಿ ಬೇಗುದಿ'
ಬೆಂಗಳೂರು, ಮೇ 31: ಮಾರಕ ಕೊರೋನ ವೈರಸ್ ಸೋಂಕಿನ ಸಂಕಷ್ಟದ ನಡುವೆಯೇ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ಕೆಲ ಹಿರಿಯ ಶಾಸಕರು ಅಸಮಾಧಾನ ವ್ಯಕ್ತಪಡಿಸಿರುವುದು ರಾಜ್ಯದಲ್ಲಿ ತೀವ್ರ ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿ ಜಿಲ್ಲೆಯ ಪ್ರಭಾವಿ ಮುಖಂಡ ಹಾಗೂ ಹಿರಿಯ ಶಾಸಕ ಉಮೇಶ್ ಕತ್ತಿ ನೇತೃತ್ವದಲ್ಲಿ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ 15ಕ್ಕೂ ಹೆಚ್ಚು ಶಾಸಕರು ಊಟದ ನೆಪದಲ್ಲಿ ಸಭೆ ಸೇರಿದ್ದು, ಬಿಎಸ್ವೈ ಅವರ ಪುತ್ರ ಬಿ.ವೈ.ವಿಜಯೇಂದ್ರ ಸರಕಾರದ ಆಡಳಿತದಲ್ಲಿ ನಡೆಸುತ್ತಿರುವ ಹಸ್ತಕ್ಷೇಪದ ವಿರುದ್ಧ ಹಿರಿಯ ಶಾಸಕರು ಆಕ್ರೋಶ ಹೊರಹಾಕಿರುವುದು ಯಡಿಯೂರಪ್ಪರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಈ ಮಧ್ಯೆ ರಾಜ್ಯಸಭೆ ಚುನಾವಣೆಯೂ ಎದುರಾಗಿದ್ದು ಸಚಿವ ಸ್ಥಾನ ವಂಚಿತ ಶಾಸಕ ಉಮೇಶ್ ಕತ್ತಿ ಅವರ ಸಹೋದರ ರಮೇಶ್ ಕತ್ತಿ ರಾಜ್ಯಸಭೆ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಆ ಸ್ಥಾನಕ್ಕೆ ಕೆಎಲ್ಇ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಪ್ರಭಾಕರ್ ಕೋರೆ ಮತ್ತೊಂದು ಅವಧಿಗೆ ಮುಂದುವರಿಯಲು ವರಿಷ್ಠರ ಮಟ್ಟದಲ್ಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಬಂಡಾಯದ ಬೇಗುದಿ ಹೆಚ್ಚಾಗಿದೆ.
ಲೋಕಸಭೆ ಚುನಾವಣೆ ವೇಳೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ರಮೇಶ್ ಕತ್ತಿ ಅವರಿಗೆ ರಾಜ್ಯಸಭೆ ಸ್ಥಾನದ ಆಸೆ ಹುಟ್ಟಿಸಿ, ಕೊನೆಯ ಕ್ಷಣದಲ್ಲಿ ಆ ಸ್ಥಾನಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಾ ಸಾಹೇಬ್ ಜೊಲ್ಲೆ ಅವರಿಗೆ ಬಿಟ್ಟುಕೊಡಲಾಗಿತ್ತು. ಇದೀಗ ರಾಜ್ಯಸಭೆ ಸ್ಥಾನಕ್ಕೆ ಕೋರೆ ಅಡ್ಡಿಯಾಗಿದ್ದು, ಕತ್ತಿಯವರ ಅಸಮಾಧಾನಕ್ಕೆ ಈ ಅಂಶವು ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಈ ಹಿಂದೆ ರಾಜ್ಯದಲ್ಲಿದ್ದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಕಾರಣವಾಗಿದ್ದ ಬೆಳಗಾವಿ ಜಿಲ್ಲೆಯ ಆಂತರಿಕ ಕಚ್ಚಾಟ, ಇದೀಗ ಬಿಜೆಪಿಯ ರಾಜಕೀಯ ಪಡಸಾಲೆಯಲ್ಲಿಯೂ ಕಾಣಿಸಿಕೊಂಡಿದ್ದು, ಎಲ್ಲಿಗೆ ತಲುಪಲಿದೆ ಎಂಬುದು ಗೊತ್ತಾಗುತ್ತಿಲ್ಲ. ಇದರ ಜೊತೆಗೆ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಸೇರಿದಂತೆ ಇನ್ನಿತರರು ಸಂಪುಟದಲ್ಲಿ ಸ್ಥಾನ ಪಡೆಯಲು ಪರೋಕ್ಷ ಕಸರತ್ತನ್ನು ಈ ಮೂಲಕ ಮುಂದುವರಿಸಿದ್ದಾರೆಂದು ಹೇಳಲಾಗಿದೆ.
ರಾಜ್ಯಸಭೆ ನಾಲ್ಕು ಸ್ಥಾನಗಳಿಗೆ ಶೀಘ್ರವೇ ಚುನಾವಣೆ ನಡೆಯಲಿದ್ದು, ಬಿಜೆಪಿ-116, ಕಾಂಗ್ರೆಸ್-68 ಹಾಗೂ ಜೆಡಿಎಸ್-34, ಇಬ್ಬರು ಪಕ್ಷೇತರರು ಹಾಗೂ ಓರ್ವ ಬಿಎಸ್ಪಿ ಶಾಸಕರಿದ್ದಾರೆ. ರಾಜ್ಯಸಭೆಯ ಓರ್ವ ಅಭ್ಯರ್ಥಿ ಗೆಲುವಿಗೆ ಒಟ್ಟು 45 ಮಂದಿ ಶಾಸಕರು ಮತ ಹಾಕಬೇಕು. ಬಿಜೆಪಿ ಎರಡು ಸ್ಥಾನ ಹಾಗೂ ಕಾಂಗ್ರೆಸ್ ಒಂದು ಸ್ಥಾನವನ್ನು ಅನಾಯಾಸವಾಗಿ ಗೆಲ್ಲಲಿದ್ದು, ನಾಲ್ಕನೆ ಸ್ಥಾನದ ಗೆಲುವಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಒಗ್ಗೂಡಬೇಕಿದೆ.
ಈ ಮಧ್ಯೆ ಬಿಜೆಪಿ ತನ್ನ ಹೆಚ್ಚುವರಿ ಮತಗಳ ಜೊತೆಗೆ ಕಾಂಗ್ರೆಸ್-ಜೆಡಿಎಸ್ 'ಅತೃಪ್ತ' ಶಾಸಕರ ಮತಗಳನ್ನು ಸೆಳೆಯಲು ತೆರೆಮರೆಯಲ್ಲಿ ಯತ್ನ ನಡೆಸಿದೆ. ಆ ಮೂಲಕ ರಾಜ್ಯಸಭೆ ಸ್ಥಾನದ ಮೇಲೆ ಕಣ್ಣಿಟ್ಟಿರುವ ರಮೇಶ್ ಕತ್ತಿ ಅಸಮಾಧಾನ ಶನಮಕ್ಕೆ ಬಿಎಸ್ವೈ ರಣತಂತ್ರ ರೂಪಿಸುತ್ತಿದ್ದು, ಯಾರಿಗೆ ಗೆಲುವಾಗಲಿದೆ ಎಂಬುದು ಸದ್ಯದ ಕುತೂಹಲವಾಗಿದೆ.