'ಬಿಜೆಪಿ ಶಾಸಕರ ಬಂಡಾಯ'ದ ಬಗ್ಗೆ ಪ್ರಶ್ನೆಗೆ ಸಿಎಂ ಯಡಿಯೂರಪ್ಪ ಉತ್ತರಿಸಿದ್ದು ಹೀಗೆ...
ಬೆಂಗಳೂರು, ಜೂ. 1: ರಾಜ್ಯದ ಆಡಳಿತಾರೂಢ ಬಿಜೆಪಿ ಸರಕಾರದ ವಿರುದ್ಧ ಕೆಲ ಶಾಸಕರ ಅಸಮಾಧಾನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, 'ನನ್ನ ಚಿತ್ತವೆನಿದ್ದರೂ ಅಭಿವೃದ್ಧಿಯತ್ತ' ಎಂದು ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಶಾಸಕರ ಬಂಡಾಯದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ 'ನನ್ನ ಚಿತ್ತ ಅಭಿವೃದಿಯ ದಿಕ್ಕಿನತ್ತ. ಮಿಕ್ಕೆಲ್ಲ ವಿಚಾರಗಳನ್ನು ಬದಿಗಿಡೋಣ' ಎಂದು ಚುಟುಕಾಗಿ ಪ್ರತಿಕ್ರಿಯೆ ನೀಡಿದರು.
ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 'ಯಡಿಯೂರಪ್ಪ ನಮ್ಮ ನಾಯಕರೇ ಅಲ್ಲ, ನಮ್ಮ ನಾಯಕರೇನಿದ್ದರೂ ಪ್ರಧಾನಿ ಮೋದಿ, ಅಮಿತ್ ಶಾ ಎಂದು ಹೇಳಿಕೆ ನೀಡಿದ್ದಾರಲ್ಲ' ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. "ನಾನು ಇಂತಹ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಇದೀಗ ರಾಜ್ಯದ ಅಭಿವೃದ್ಧಿಯ ಬಗ್ಗೆ ಅಷ್ಟೇ ಗಮನಹರಿಸುತ್ತಿದ್ದೇನೆ" ಎಂದು ಹೇಳಿದರು.
ರಾಜ್ಯದಲ್ಲಿ ಮಾರಕ ಕೊರೋನ ವೈರಸ್ ಸೋಂಕು ಹೆಚ್ಚುತ್ತಿದ್ದು, ಈ ಸೋಂಕು ನಿಯಂತ್ರಣದ ಸವಾಲು ನಮ್ಮ ಮುಂದಿದೆ. ಇಂತಹ ಸಂದರ್ಭದಲ್ಲಿ ನಾನು ರಾಜ್ಯದ ಅಭಿವೃದ್ಧಿ ಮತ್ತು ಕೊರೋನ ಸೋಂಕಿನಂತಹ ಗಂಭೀರ ವಿಚಾರಗಳನ್ನು ಬಿಟ್ಟು ಅನ್ಯ ವಿಷಯಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿದರು.