ಕಿಟ್ ವಿತರಣೆ ವೇಳೆ ಮುಸ್ಲಿಮರಿಂದ ಹಲ್ಲೆ ಎಂಬ ಸುದ್ದಿ ಸುಳ್ಳು: ದಾವಣಗೆರೆ ಎಸ್ಪಿ ಹನುಮಂತರಾಯ
ದಾವಣಗೆರೆ, ಜೂ.1: ಆಹಾರದ ಕಿಟ್ ವಿತರಣೆಯಲ್ಲಿ ಶೇಖರಪ್ಪ ನಗರದಲ್ಲಿ ಗಲಾಟೆ ನಡೆದಿದೆ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಡ್ ಕಿಟ್ ವಿತರಣೆ ವೇಳೆ ಶ್ರೀಕಾಂತ ಎನ್ನುವವರು ಕಾಂಗ್ರೆಸ್ನವರು ಮತ್ತು ಮುಸ್ಲಿಮರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅದರೆ ಅಲ್ಲಿ ಆ ರೀತಿ ನಡೆದಿಲ್ಲ. ಅವರು ಠಾಣೆಗೆ ಬಂದು ದೂರು ಸಹ ದಾಖಲಿಸಿಲ್ಲ. ಕೆಲ ವರ್ಷದ ಹಿಂದೆಯೇ ಅವರಿಗೆ ಗಾಯವಾಗಿತ್ತು. ಅದನ್ನು ಪುಡ್ ಕಿಟ್ ವಿತರಣೆ ವೇಳೆಯಲ್ಲಿ ನಡೆದ ನೂಕು ನುಗ್ಗಲಿನಲ್ಲಿ ನಡೆದ ಸಣ್ಣ ಗಾಯಗಳನ್ನು ಅವರು ಹಲ್ಲೆ ನಡೆದಿದೆ ಎಂದು ಬಿಂಬಿಸಿಕೊಂಡಿದ್ದಾರೆ. ಅದರೆ ದೂರು ನೀಡದೆ ಇದ್ದಾಗ ನಮ್ಮ ಪೋಲಿಸರು ಅವರ ಬಳಿ ಹೋಗಿ ದೂರು ಕೊಡುವಂತೆ ಹೇಳಿದಾಗ ಅವರು ಜಾತಿ ನಿಂದನೆ ಕೇಸು ದಾಖಲಿಸಿದ್ದಾರೆ. ಇದುವರೆಗೂ ಈ ಸಂಬಂಧ ಯಾರನ್ನೂ ಬಂಧಿಸಿಲ್ಲ. ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಹನುಮಂತರಾಯ ತಿಳಿಸಿದರು.
ಘಟನೆಯ ಹಿನ್ನೆಲೆ: ಶೇಖರಪ್ಪ ನಗರದಲ್ಲಿ ಪುಡ್ ಕಿಟ್ ವಿತರಣೆ ಗಲಾಟೆ ನಡೆದಿದೆ ಎಂದು ಮಾಧ್ಯಮದ ಅಳಲು ತೋಡಿಕೊಂಡಿದ್ದ ಶ್ರೀಕಾಂತ ಎಂಬಾತ, ಕಾಂಗ್ರೆಸ್ನವರು ಮತ್ತು ಮುಸ್ಲಿಮರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.
"ಎಲ್ಲರಿಗೂ ಕಿಟ್ ಹಂಚಿ ಎಂದು ನಾವು ಹೇಳಿದಾಗ ಕಾಂಗ್ರೆಸ್ ಗೆ ವೋಟ್ ಹಾಕಿದವರು ಮತ್ತು ಮುಸ್ಲಿಮರಿಗೆ ಮಾತ್ರ ಕಿಟ್ ಕೊಡುತ್ತೇವೆ ಎಂದು ಅವರು ಹೇಳಿದರು. ಪ್ರಶ್ನಿಸಿದ್ದಕ್ಕೆ ಸುಮಾರು 40-50 ಮಂದಿ ಮುಸ್ಲಿಮರು ನನ್ನ ಕಾಲಿಗೆ ಹಲ್ಲೆ ಮಾಡಿದ್ದಾರೆ. ಆಸ್ಪತ್ರೆಗೆ ತೆರಳುವ ವೇಳೆ ಅಪ್ಪಾಜಿಯ ಕೈಗೆ ರಫೀಕ್ ಎನ್ನುವ ಪೋಲಿಸ್ ಹಲ್ಲೆ ಮಾಡಿದ್ದಾರೆ. ಠಾಣೆಗೆ ಹೋದರೆ ಯಾವುದೇ ಕೇಸ್ ತೆಗೆದುಕೊಳ್ಳಲ್ಲ. ಬರೀ ರಾಜಿ ಮಾಡುತ್ತಾರೆ. ಸುಮ್ಮನೆ ಮುಸ್ಲಿಮ್ ಪೊಲೀಸರು ಲಾಠಿಯಿಂದ ಹೊಡೆಯುತ್ತಾರೆ. ನಮ್ಮ ಜೀವಕ್ಕೆ ಅಪಾಯವಾದರೆ ಆರ್ ಎಂಸಿ ಪೊಲೀಸರೆ ಕಾರಣ" ಎಂದು ಆರೋಪಿಸಿದ್ದರು.