ಆನ್ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂಬ ಬೇಸರ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ
ಮಲಪ್ಪುರಂ: ಕೋವಿಡ್-19 ಲಾಕ್ಡೌನ್ ಹಿನ್ನೆಲೆಯಲ್ಲಿ ನಡೆಯುತ್ತಿರುವ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಮನನೊಂದು ಕೇರಳದ ಮಲಪ್ಪುರಂ ಜಿಲ್ಲೆಯ ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ.
“ಮನೆಯಲ್ಲಿ ಟಿವಿ ಇದ್ದರೂ ಅದು ಸರಿಯಿರಲಿಲ್ಲ. ಅದನ್ನು ದುರಸ್ತಿಗೊಳಿಸಬೇಕು ಎಂದು ಆಕೆ ಹೇಳಿದ್ದಳು. ಆದರೆ ದುರಸ್ತಿಗೊಳಿಸಲು ನೀಡುವುದು ನನಗೆ ಸಾಧ್ಯವಾಗಿಲ್ಲ. ಆಕೆ ಹೀಗೇಕೆ ಮಾಡಿಕೊಂಡಳೆಂದು ತಿಳಿದು ಬಂದಿಲ್ಲ. ಏನಾದರೂ ಮಾಡುವ, ಸ್ನೇಹಿತೆಯ ಮನೆಗೆ ಹೋಗಿ ಕಲಿಯಬಹುದು ಎಂದು ನಾನು ಹೇಳಿದ್ದೆ'' ಎಂದು ದಿನಗೂಲಿ ಕಾರ್ಮಿಕನಾಗಿರುವ ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ. ಲಾಕ್ಡೌನ್ನಿಂದಾಗಿ ಕುಟುಂಬ ತೀವ್ರ ಆರ್ಥಿಕ ಸಂಕಷ್ಟದಲ್ಲಿತ್ತು. ಆಕೆಯ ತಾಯಿ ಕೆಲವೇ ವಾರಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದರು.
ಇನ್ನು ಮುಂದೆ ಕಲಿಯುವುದು ಸಾಧ್ಯವಾಗುವುದಿಲ್ಲ ಎಂದು ವಿದ್ಯಾರ್ಥಿನಿ ನೊಂದಿದ್ದಳು. ಟಿವಿಯೂ ಸರಿಯಿರದ ಕಾರಣ ಆನ್ಲೈನ್ ತರಗತಿಗಳಿಗೆ ಹಾಜರಾಗಲು ಏನು ಮಾಡುವುದು ಎಂದು ತಿಳಿಯದೆ ಆಕೆ ಕಂಗಾಲಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಘಟನೆ ಕುರಿತಂತೆ ಕೇರಳ ಶಿಕ್ಷಣ ಸಚಿವ ಸಿ ರವೀಂದ್ರನಾಥ್ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.