ಮಂಗಳೂರಿನಲ್ಲಿ ರವಿ ಪೂಜಾರಿ ಆಪ್ತನ ಬಂಧನ
ಬೆಂಗಳೂರು, ಜೂ.3: ಭೂಗತ ಪಾತಕಿ ರವಿ ಪೂಜಾರಿ ನಡೆಸುತ್ತಿದ್ದ ಸುಲಿಗೆ ಕೃತ್ಯಗಳಿಗೆ ಬಲಗೈ ಬಂಟನಾಗಿದ್ದ ಆರೋಪದಡಿ ಉಡುಪಿಯ ಗುಲಾಂ ಮುಹಮ್ಮದ್(50) ಎಂಬಾತನನ್ನು ಸಿಸಿಬಿ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಈತ ರವಿ ಪೂಜಾರಿ ಮಾಡುವ ಕೃತ್ಯಕ್ಕೆ, ಸುಲಿಗೆಗೆ ಸಹಾಯ ಮಾಡುತ್ತಿದ್ದನು ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸಿಸಿಬಿ ಅಧಿಕಾರಿಗಳು ಗುಲಾಂ ಅನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಸದ್ಯ ಗುಲಾಂನನ್ನು 10 ದಿನಗಳವರೆಗೆ ನ್ಯಾಯಾಲಯ ಪೊಲೀಸ್ ವಶಕ್ಕೆ ನೀಡಿದ್ದು, ತನಿಖಾ ಅಧಿಕಾರಿಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ.
ಆರೋಪಿ ಗುಲಾಂ, ಟ್ರಾವೆಲ್ ಏಜೆನ್ಸಿ ನಡೆಸುತ್ತಿದ್ದು ಇತ್ತೀಚೆಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದನು ಎನ್ನುವ ಮಾಹಿತಿ ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹದಿನೈದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಭೂಗತ ಪಾತಕಿ ಮಂಗಳೂರಿನ ರವಿ ಪೂಜಾರಿಯನ್ನು ಇತ್ತೀಚೆಗೆ ಇಂಟರ್ಪೋಲ್ ಪೊಲೀಸರು ಪಶ್ಚಿಮ ಆಫ್ರಿಕಾದ ಸೆನೆಗಲ್ ದೇಶದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆ ತಂದಿದ್ದರು.