‘ಖೇಲ್ರತ್ನ’ಕ್ಕೆ ನೀರಜ್ ಹೆಸರು ಶಿಫಾರಸು
ಹೊಸದಿಲ್ಲಿ, ಜೂ.3: ಸ್ಟಾರ್ ಜಾವಲಿನ್ ಎಸೆತಗಾರ ನೀರಜ್ ಚೋಪ್ರಾರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಭಾರತದ ಅಥ್ಲೆಟಿಕ್ಸ್ ಒಕ್ಕೂಟ(ಎಎಫ್ಐ)ಬುಧವಾರ ಖಚಿತಪಡಿಸಿದೆ.
ಎಎಫ್ಐ ಸತತ ಮೂರನೇ ವರ್ಷ ಚೋಪ್ರಾರನ್ನು ಖೇಲ್ರತ್ನಕ್ಕೆ ಶಿಫಾರಸು ಮಾಡಿದೆ. ಭಾರತದ ಖ್ಯಾತ ಓಟಗಾರ್ತಿ ದ್ಯುತಿ ಚಂದ್, ಏಶ್ಯನ್ ಗೇಮ್ಸ್ ಚಾಂಪಿಯನ್ ಅರ್ಪಿಂದರ್ ಸಿಂಗ್(ತ್ರಿಪಲ್ ಜಂಪ್) ,ಮನ್ಜೀತ್ ಸಿಂಗ್(800 ಮೀ.) ಹಾಗೂ ಹಾಲಿ ಏಶ್ಯನ್ ಚಾಂಪಿಯನ್, ಓಟಗಾರ್ತಿ ಪಿ.ಯು. ಚಿತ್ರಾರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.
22ರ ಹರೆಯದ ಚೋಪ್ರಾ 2018ರಲ್ಲಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ. 2018ರಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನ ಗೆದ್ದಿರುವುದಕ್ಕೆ ಈ ಗೌರವ ಪಡೆದಿದ್ದರು. ಅದೇ ವರ್ಷ ಖೇಲ್ರತ್ನಕ್ಕೂ ಶಿಫಾರಸುಗೊಂಡಿದ್ದರು. 2018ರಲ್ಲಿ ಚೋಪ್ರಾ ಏಶ್ಯನ್ ಗೇಮ್ಸ್ನಲ್ಲೂ ಚಿನ್ನ ಜಯಿಸಿದ್ದರು. ಚೋಪ್ರಾ ಈಗಾಗಲೇ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿದ್ದಾರೆ. ಅಂತರ್ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಂತರ್ರಾಷ್ಟ್ರೀಯ ತರಬೇತಿ ಪುಷ್ಟೀಕರಣ ತರಬೇತಿ ಕಾರ್ಯಕ್ರಮವನ್ನು ಪೂರೈಸಿರುವ ಏಕೈಕ ಭಾರತೀಯ ಉಪ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸುಗೊಂಡಿದ್ದಾರೆ. 1982ರ ಏಶ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ಡಿಸ್ಕಸ್ ಎಸೆತಗಾರ ಕುಲದೀಪ್ ಭುಲ್ಲರ್, ಮಾಜಿ ಓಟಗಾರ್ತಿ ಜಿನ್ಸಿ ಫಿಲಿಪ್ ಧ್ಯಾನ್ಚಂದ್ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದಾರೆ.