ಕೇರಳದಲ್ಲಿ ಆನೆಯ ಹತ್ಯೆಯ ತನಿಖೆ ನಡೆಸಲಾಗುವುದು: ಪ್ರಕಾಶ್ ಜಾವಡೇಕರ್
ಹೊಸದಿಲ್ಲಿ, ಜೂ.4: ಕೇರಳದಲ್ಲಿ ಗರ್ಭಿಣಿ ಆನೆಯೊಂದು ಸ್ಫೋಟಕ ಪದಾರ್ಥ ತುಂಬಿದ್ದ ಅನಾನಸ್ ತಿಂದು ಸಾವನ್ನಪ್ಪಿರುವ ಘಟನೆಯ ಬಗ್ಗೆ ಕೇಂದ್ರ ಸರಕಾರ ತನಿಖೆ ನಡೆಸಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಗುರುವಾರ ಹೇಳಿದ್ದಾರೆ.
ಸ್ಫೋಟಕ ಪದಾರ್ಥ ತುಂಬಿದ್ದ ಅನಾನಸ್ ತಿಂದಿದ್ದ ಆನೆ ನೋವು ತಾಳಲಾರದೆ ನದಿ ನೀರಿನಲ್ಲಿ ನಿಂತಿದ್ದ ದೃಶ್ಯವನ್ನು ಕಳೆದ ವಾರ ಅರಣ್ಯ ಅಧಿಕಾರಿಯೊಬ್ಬರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು. ಈ ದೃಶ್ಯವನ್ನು ನೋಡಿದವರೆಲ್ಲರೂ ಕಿಡಿಗೇಡಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
"ಆನೆಯನ್ನು ಸಾಯಿಸಿರುವ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಸೂಕ್ತ ತನಿಖೆ ನಡೆಸಲು ಹಾಗೂ ಆರೋಪಿಯನ್ನು ಬಂಧಿಸುವ ನಿಟ್ಟಿನಲ್ಲಿ ನಾವು ಎಲ್ಲ ಪ್ರಯತ್ನವನ್ನು ಮಾಡಲಿದ್ದೇವೆ. ಪಟಾಕಿಯನ್ನು ತಿನ್ನಿಸಿ ಪ್ರಾಣಿಯನ್ನು ಕೊಲ್ಲುವುದು ಭಾರತೀಯ ಸಂಸ್ಕೃತಿಯಲ್ಲ'' ಎಂದು ಪ್ರಕಾಶ್ ಜಾವಡೇಕರ್ ಟ್ವೀಟ್ ಮಾಡಿದ್ದಾರೆ.
Next Story