ಒಲಾರ್ಚಸ್ ಮಿಲಿಯಾರಿಸ್ ಮಿಡತೆ ಅಪಾಯಕಾರಿಯಲ್ಲ: ಕೀಟಶಾಸ್ತ್ರಜ್ಞರ ವರದಿ
ಮಂಗಳೂರು, ಜೂ.4: ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದಲ್ಲಿ ಸಂಗ್ರಹಿಸಿದ್ದ ಒಲಾರ್ಚಸ್ ಮಿಲಿಯಾರಿಸ್ ಕಾಫಿ ಸ್ಪಾಟೆಡ್ ಮಿಡತೆ ಅಪಾಯಕಾರಿವಲ್ಲ ಎಂದು ಕೀಟಶಾಸ್ತ್ರಜ್ಞರ ವರದಿಯಲ್ಲಿ ಬಹಿರಂಗಗೊಂಡಿದೆ.
ಈ ಮಿಡತೆ ಜಾತಿಗಳನ್ನು ಸೆಂಟ್ರಲ್ ಪ್ಲಾಂಟೇಷನ್ ಕ್ರಾಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CPCRI, Kasargod), ನ್ಯಾಷನಲ್ ಬ್ಯುರೋ ಆಫ್ ಅಗ್ರಿಕಲ್ಚರ್ ಇನ್ಸೆಕ್ಟ್ ರಿಸೋರ್ಸೆಸ್, ಬೆಂಗಳೂರು (NBAIR), ಗಾಂಧಿ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿಗೆ (GKVK) ಕಳುಹಿಸಳಾಗಿತ್ತು. ಕೀಟಶಾಸ್ತ್ರಜ್ಞರಿಂದ ಬಂದಿರುವ ವರದಿಯ ಪ್ರಕಾರ ಕೀಟವು ಒಲಾರ್ಚಸ್ ಮಿಲಿಯಾರಿಸ್ ಮಿಲಿಯಾರಿಸ್(Aularches miliaris) ಸ್ಪಾಟೆಡ್ ಕಾಫಿ ಮಿಡತೆ (spotted coffee grasshopper) ಎಂದು ಗುರುತಿಸಲ್ಪಟ್ಟಿದ್ದು, ಅಪಾಯಕಾರಿವಲ್ಲ ಎಂಬುದು ದೃಢಪಟ್ಟಿದೆ.
ದಕ್ಷಿಣ ಭಾರತದ ಪಶ್ಚಿಮಘಟ್ಟಗಳಲ್ಲಿ ಈ ಮಿಡತೆಗಳು ಕಾಣಿಸಿಕೊಳ್ಳುತ್ತವೆ. ಇದು ಅಳವಿನಂಚಿನ ಕೀಟ (ಇಂಟರ್ನ್ಯಾಷನಲ್ ಯುನಿಯನ್ ಫಾರ್ ಕನ್ಸರ್ವೇಷನ್ ಆಫ್ ನೇಚರ್). ಈ ಮಿಡತೆ ಕಾಫಿ, ಬಾಳೆ, ಗೇರು, ಅಡಿಕೆ, ತೆಂಗು, ಏಲಕ್ಕಿ ಹಾಗೂ ಭತ್ತದ ಬೆಳೆಯ ಮೇಲೆ ಕಾಣಿಸುವ ಸಾಧ್ಯತೆ ಇದೆ. ಇವು ಅಪಾಯಕಾರಿಯಲ್ಲ ಎನ್ನುವುದು ವರದಿಯಲ್ಲಿ ಕಂಡುಬಂದಿದೆ.
ಭೂಮಿಯ ಉಳುಮೆಯಿಂದ ಇವುಗಳು ಮೊಟ್ಟೆ ಹಂತದಲ್ಲಿ ನಿರ್ವಹಣೆ ಮಾಡಬಹುದಾಗಿದೆ. ಮರಿ ಮಿಡತೆಗಳನ್ನು ಹಿಡಿದು ಬೇರೆಡೆಗೆ ಬಿಡಬಹುದಾಗಿದೆ. ಅಳವಿನಂಚಿನಲ್ಲಿರುವ ಈ ಕೀಟದ ನಿರ್ವಹಣೆಯನ್ನು ಎಚ್ಚರಿಕೆಯಿಂದ ಮಾಡಬೇಕಾಗಿದೆ. ಕೀಟಬಾಧೆಯಿಂದ ಬೆಳೆ ನಾಶವಾದ ಸಂದರ್ಭದಲ್ಲಿ ಬೇವಿನ ಮೂಲದ ಕೀಟನಾಶಕ ಅಥವಾ ಲ್ಯಾಂಬ್ಡಾ ಸೈಹಾಲೋಥ್ರಿನ್ 5 ಇಸಿ 1.5 ಮಿ.ಲೀ. ಪ್ರತಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಅಳವಿನಂಚಿನಲ್ಲಿರುವ ಈ ಕೀಟದ ಸಂರಕ್ಷಣೆ ಅಗತ್ಯ ಎಂದು ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.