ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದು ಸಂತಸವಾಗಿದೆ: ಹರ್ಮನ್ಪ್ರೀತ್ ಸಿಂಗ್
ಹೊಸದಿಲ್ಲಿ: ಅರ್ಜುನ ಪ್ರಶಸ್ತಿಗೆ ಹಾಕಿ ಇಂಡಿಯಾ ಹರ್ಮನ್ಪ್ರೀತ್ ಸಿಂಗ್, ಮಹಿಳಾ ತಂಡದ ವಂದನಾ ಕಟಾರಿಯಾ ಮತ್ತು ಮೋನಿಕಾ ಮಲಿಕ್ ಅವರನ್ನು ನಾಮನಿರ್ದೇಶನ ಮಾಡಿದ್ದರೆ, ಕ್ರೀಡಾ ರಂಗದ ಅತ್ಯುನ್ನತ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ನಾಯಕಿ ರಾಣಿ ರಾಂಪಾಲ್ರನ್ನು ಶಿಫಾರಸು ಮಾಡಲಾಗಿದೆ.
ರಾಷ್ಟ್ರೀಯ ಒಕ್ಕೂಟದಿಂದ ನಾಮ ನಿರ್ದೇಶನಗೊಂಡ ನಂತರ ಅರ್ಜುನ ಪ್ರಶಸ್ತಿಗೆ ಸಂಬಂಧಿಸಿದಂತೆ ಭಾರತೀಯ ಪುರುಷರ ಹಾಕಿ ತಂಡದ ಡಿಫೆಂಡರ್ ಹರ್ಮನ್ಪ್ರೀತ್ ಸಿಂಗ್ ಗುರುವಾರ ಪ್ರತಿಕ್ರಿಯೆ ನೀಡಿ ತಮ್ಮ ತಂಡದ ಸಹ ಆಟಗಾರರು ತಮ್ಮ ಯಶಸ್ಸಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ ಎಂದು ಹೇಳಿದರು.
ಹರ್ಮನ್ಪ್ರೀತ್ ಕಳೆದ ವರ್ಷ ರಶ್ಯ ವಿರುದ್ಧ ಎಫ್ಐಎಚ್ ಒಲಿಂಪಿಕ್ಸ್ ಅರ್ಹತಾ ಪಂದ್ಯಗಳಲ್ಲಿ ಜಯಿಸಿದ ತಂಡದ ಸದಸ್ಯರಾಗಿದ್ದರು.
‘‘ಕಳೆದ ಎರಡು ವರ್ಷಗಳಿಂದ ನಾನು ತಂಡಕ್ಕೆ ಕೊಡುಗೆ ನೀಡುತ್ತಿರುವ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಹಾಕಿ ಒಂದು ತಂಡದ ಕ್ರೀಡೆಯಾಗಿದೆ ಮತ್ತು ನಾವೆಲ್ಲರೂ ತಂಡಕ್ಕೆ ಕೊಡುಗೆ ನೀಡುತ್ತಿದ್ದೇವೆ. ನಾವು ಗೋಲು ಹೊಡೆದರೆ, ಅದು ಗೋಲು ಗಳಿಸಿದವರಿಗೆ ಮಾತ್ರವಲ್ಲ ಇಡೀ ತಂಡಕ್ಕೆ ಅದರ ಯಶಸ್ಸು ಸಲ್ಲುತ್ತದೆ ’’ಎಂದು ಹರ್ಮನ್ಪ್ರೀತ್ ಹೇಳಿದರು.
‘‘ರಾಣಿ ಅವರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಹಾಗೂ ವಂದನಾ ಮತ್ತು ಮೋನಿಕಾ ಅವರನ್ನು ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ತಿಳಿದಾಗ ನನಗೆ ತುಂಬಾ ಸಂತೋಷವಾಯಿತು. ಅವರು ಇತ್ತೀಚಿನ ದಿನಗಳಲ್ಲಿ ಕೆಲವು ಅದ್ಭುತ ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸಲು ನಾನು ಬಯಸುತ್ತೇನೆ. ಒಡಿಶಾದಲ್ಲಿ ನಡೆದ ಎಫ್ಐಎಚ್ ಸರಣಿ ಫೈನಲ್ನಲ್ಲಿ ತಂಡದ ಗೆಲುವಿಗೆ ಡ್ರ್ಯಾಗ್ಫ್ಲಿಕ್ ಸಂವೇದನೆ ಪ್ರಮುಖ ಪಾತ್ರ ವಹಿಸಿತು’’ ಎಂದರು.
ಟೋಕಿಯೊ ಒಲಿಂಪಿಕ್ಸ್ ಟೆಸ್ಟ್ ಪಂದ್ಯಾವಳಿಯಲ್ಲಿ, ಮನ್ಪ್ರೀತ್ಸಿಂಗ್ ಅವರ ಅನುಪಸ್ಥಿತಿಯಲ್ಲಿ ಹರ್ಮನ್ಪ್ರೀತ್ ಸಿಂಗ್ ಭಾರತವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದರು. ಈಗ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ನಲ್ಲಿ ಸ್ಥಾನ ಕಾಯ್ದಿರಿಸಿರುವುದು ಕಳೆದ ವರ್ಷ ತಂಡಕ್ಕೆ ದೊರೆತ ದೊಡ್ಡ ಸಾಧನೆ ಎಂದು 24ರ ಹರೆಯದ ಹರ್ಮನ್ಪ್ರೀತ್ ಹೇಳಿದರು. ‘‘ಕಳೆದ ವರ್ಷ ತವರಿನ ಪ್ರೇಕ್ಷಕರ ಸಮ್ಮುಖದಲ್ಲಿ ಟೋಕಿಯೊ ಒಲಿಂಪಿಕ್ಸ್ಗೆ ಅರ್ಹತೆ ಪಡೆದಿರುವುದು ಅದ್ಭುತವಾಗಿದೆ. ಇದು ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ವಿಚಾರ. ನಮ್ಮ ತಂಡದ ಸಮತೋಲನವು ಅದ್ಭುತವಾಗಿದೆ ಮತ್ತು ಪಂದ್ಯಾವಳಿಯನ್ನು ಸ್ಮರಣೀಯವಾಗಿಸಲು ಪ್ರತಿಯೊಬ್ಬರೂ ಶ್ರಮಿಸಿದರು ’’ಎಂದು ಅವರು ಹೇಳಿದರು.
‘‘ಮುಂದಿನ ವರ್ಷ ಒಲಿಂಪಿಕ್ಸ್ನಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಲು ನಾವು ಶ್ರಮಿಸುತ್ತೇವೆ. ಇದು ನಮ್ಮ ಏಕೈಕ ಗುರಿಯಾಗಿದೆ ಮತ್ತು ನಾವೆಲ್ಲರೂ ಸವಾಲಿಗೆ ಮುಂದಾ
ಗಿದ್ದೇವೆ. ಟೋಕಿಯೊದಲ್ಲಿ ನಮ್ಮ ಮೊದಲ ಪಂದ್ಯವನ್ನು ಆಡಿದ ನಂತರ ನಾವು ಹೆಚ್ಚು ಉತ್ತಮ ತಂಡವಾಗುತ್ತೇವೆಂದುಆಶಿಸುತ್ತೇವೆ’’ ಎಂದರು.