ಉಡುಪಿ ಜಿಲ್ಲೆಯೊಂದರಲ್ಲೇ 350 ಪಾಸಿಟಿವ್ ಪ್ರಕರಣಗಳು ಸಾಧ್ಯತೆ: ಸಚಿವ ಡಾ.ಸುಧಾಕರ್
ರಾಜ್ಯದಲ್ಲಿಂದು ಕೊರೋನ ಮಹಾಸ್ಫೋಟ ಸಾಧ್ಯತೆ
ಬೆಂಗಳೂರು, ಜೂ.5: ಕೊರೋನ ವೈರಸ್ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಶುಕ್ರವಾರ(ಜೂ.5)ವೂ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯೊಂದರಲ್ಲೇ ಶುಕ್ರವಾರ ಒಂದೇ ದಿನ 350ರಷ್ಟು ಕೊರೋನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿರುವುದಾಗಿ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಗುರುವಾರ ಸಂಜೆಯ ವರದಿ ಪ್ರಕಾರ 1732 ಸ್ಯಾಂಪಲ್ಗಳ ವರದಿ ಬರಲು ಬಾಕಿ ಇದೆ ಎಂದು ಉಡುಪಿ ಡಿಎಚ್ಒ ಮಾಹಿತಿ ನೀಡಿದ್ದರು. ಮಹಾರಾಷ್ಟ್ರದಿಂದ ಆಗಮಿಸಿದವರ ಪೈಕಿ 92 ಮಂದಿಯಲ್ಲಿ ಗುರುವಾರ ಕೊರೋನ ಪಾಸಿಟಿವ್ ದೃಢಪಟ್ಟಿತ್ತು. ಆ ಮೂಲಕ ಜಿಲ್ಲೆಯಲ್ಲಿ ಪಾಸಿಟವ್ ಪ್ರಕರಣಗಳ ಸಂಖ್ಯೆ 563ಕ್ಕೇರಿದ್ದು, ರಾಜ್ಯದಲ್ಲೇ ಅತ್ಯಧಿಕ ಕೊರೋನ ಸೋಂಕಿತರ ಜಿಲ್ಲೆಯಾಗಿ ಉಡುಪಿ ಗುರುತಿಸಿಕೊಂಡಿದೆ.
ಅದೇರೀತಿ 510 ಪ್ರಕರಣಗಳೊಂದಿಗೆ ರಾಜ್ಯದಲ್ಲಿ 2ನೇ ಸ್ಥಾನದಲ್ಲಿರುವ ಕಲಬುರಗಿಯಲ್ಲೂ ಶುಕ್ರವಾರ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ