ರಾಜ್ಯದಲ್ಲಿ ಕೊರೋನ ನಾಗಾಲೋಟ: ಸೋಂಕಿಗೆ ಮತ್ತಿಬ್ಬರು ಬಲಿ, 378 ಮಂದಿಗೆ ಪಾಸಿಟಿವ್
ಉಡುಪಿ, ಯಾದಗಿರಿ, ಕಲಬುರಗಿಯಲ್ಲಿ ಸೋಂಕಿನ ಪ್ರಮಾಣದಲ್ಲಿ ಆತಂಕಕಾರಿ ಏರಿಕೆ
ಬೆಂಗಳೂರು, ಜೂ.6: ಇದುವರೆಗೆ ರಾಜ್ಯದಲ್ಲಿ ನಿಧಾನಗತಿಯಲ್ಲಿ ಏರುತ್ತಿದ್ದ ಕೊರೋನ ಸೋಂಕಿನ ಪ್ರಕರಣಗಳು ವೇಗ ಪಡೆದುಕೊಂಡಿದ್ದು, ವ್ಯಾಪಕವಾಗಿ ಹರಡುವ ಮೂಲಕ ರಾಜ್ಯದ ಜನತೆಯಲ್ಲಿ ಆತಂಕವನ್ನು ಉಂಟುಮಾಡಿದೆ. ಕರ್ನಾಟಕದಲ್ಲಿ ಒಂದೇ ದಿನ ಮತ್ತೆ 378 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 5,213ಕ್ಕೆ ಏರಿಕೆಯಾಗಿದೆ.
ಬೀದರ್ ಮತ್ತು ವಿಜಯಪುರ ಜಿಲ್ಲೆಯಲ್ಲಿ ಕೊರೋನದಿಂದ ತಲಾ ಒಂದು ಸಾವು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 59ಕ್ಕೆ ಏರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿದ ಬುಲೆಟಿನ್ ನಲ್ಲಿ ಶುಕ್ರವಾರ ಸಂಜೆ 5 ಗಂಟೆಯಿಂದ ಶನಿವಾರ ಸಂಜೆ 5 ಗಂಟೆವರೆಗೆ ಎರಡು ಸಾವು ಮತ್ತು 378 ಕೋವಿಡ್ ಪ್ರಕರಣಗಳು ಪಾಸಿಟಿವ್ ಬಂದಿರುವುದಾಗಿ ಮಾಹಿತಿ ನೀಡಲಾಗಿದೆ.
ಬೀದರ್ ಜಿಲ್ಲೆಯ 55 ವರ್ಷದ ಮಹಿಳೆಯೊಬ್ಬರು ಕೆಮ್ಮು, ತೀವ್ರ ಉಸಿರಾಟದ ತೊಂದರೆಯಿಂದ ಮೇ.16 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜೂ.5 ರಂದು ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆಯ 82 ವರ್ಷದ ಮಹಿಳೆಯೊಬ್ಬರು ಮಧುಮೇಹ ಮತ್ತು ರಕ್ತದೊತ್ತಡದಿಂದ ಮೇ.27 ರಂದು ಸಾವನ್ನಪ್ಪಿದ್ದಾರೆ. ಇವರ ಕೊರೋನ ವರದಿಯು ಪಾಸಿಟಿವ್ ಬಂದಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಉಡುಪಿ 121, ಯಾದಗಿರಿ 103, ಕಲಬುರಗಿ 69, ದಕ್ಷಿಣ ಕನ್ನಡ 24, ಬೆಂಗಳೂರು ನಗರ 18, ದಾವಣಗೆರೆ ಮತ್ತು ವಿಜಯಪುರ ಜಿಲ್ಲೆಯಲ್ಲಿ ತಲಾ 6, ಬೆಳಗಾವಿ 5, ಗದಗ 4, ಮಂಡ್ಯ, ಹಾವೇರಿ, ಹಾಸನ ಮತ್ತು ಧಾರವಾಡದಲ್ಲಿ ತಲಾ 3, ಉತ್ತರ ಕನ್ನಡ, ಚಿಕ್ಕಬಳ್ಳಾಪುರ ಮತ್ತು ರಾಯಚೂರಿನಲ್ಲಿ ತಲಾ 2, ಬೀದರ್, ಕೊಪ್ಪಳ, ಕೋಲಾರ ಮತ್ತು ತುಮಕೂರಿನಲ್ಲಿ ತಲಾ ಒಂದೊಂದು ಪ್ರಕರಣಗಳು ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 5,213 ಕೊರೋನ ಸೋಂಕಿತರ ಪೈಕಿ 1,968 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 280 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 59 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 3,184 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.