ರಾಜ್ಯ ಪುರಾತತ್ವ ಇಲಾಖೆಯ ವಿಲೀನ ಹಿಂಪಡೆಯಲು ಹೆಚ್ಚಿನ ಒತ್ತಡ
ವಿಲೀನಗೊಂಡು ಎರಡು ವರ್ಷವಾದರೂ ಯಾವುದೇ ಸಭೆಯಿಲ್ಲ, ಬೆಳವಣಿಗೆಗಳೂ ಇಲ್ಲ
ಬೆಂಗಳೂರು, ಜೂ.7: ರಾಜ್ಯ ಪುರಾತತ್ವ ಇಲಾಖೆಯನ್ನು ಪ್ರವಾಸೋದ್ಯಮ ಇಲಾಖೆಯೊಂದಿಗೆ ವಿಲೀನಗೊಳಿಸಿ ಎರಡು ವರ್ಷ ಪೂರ್ಣಗೊಂಡಿತು. ಆದರೆ ಈವರೆಗೆ ಯಾವುದೇ ಸಭೆಯಾಗಲಿ, ಸಣ್ಣ ಬೆಳವಣಿಗೆಗಳಾಗಲಿ ನಡೆಯಲಿಲ್ಲ. ಹೀಗಾಗಿ ರಾಜ್ಯ ಪುರಾತತ್ವ ಇಲಾಖೆ ಪ್ರತ್ಯೇಕವಾಗಿಯೇ ಇರಲಿ. ಇಲ್ಲವೇ ಹಿಂದಿನಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಡಿಯಲ್ಲೇ ಇರಲಿ ಎಂಬ ಕೂಗು ಸಾಂಸ್ಕೃತಿಕ ವಲಯದಲ್ಲಿ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ವಿರೋಧ ವ್ಯಕ್ತವಾಗಿದೆ.
ಇದರಿಂದಾಗಿ ನಮ್ಮ ಕಲಾ ಪರಂಪರೆ, ಸಂಸ್ಕೃತಿ, ಇತಿಹಾಸವನ್ನು ಸಾರಿ ಹೇಳುವ ಸ್ಮಾರಕಗಳ ರಕ್ಷಣೆಕಾರ್ಯದಲ್ಲಿ ವಿಳಂಬವಾಗುತ್ತಿದೆ. ಅಲ್ಲದೆ, ಪ್ರವಾಸೋದ್ಯಮ ಇಲಾಖೆಯು ವ್ಯವಹಾರದ ದೃಷ್ಟಿಯಿಂದ ನೋಡುತ್ತದೆ. ಆದರೆ ಪುರಾತತ್ವ ಇಲಾಖೆಯು ಸಂಸ್ಕೃತಿ, ಪರಂಪರೆಯ ರಕ್ಷಣೆಯ ದೃಷ್ಟಿಕೋನವನ್ನು ಹೊಂದಿದೆ. ಹೀಗಾಗಿ ಪುರಾತತ್ವ ಇಲಾಖೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲೇ ಇರಬೇಕು. ದೇಶದ ಎಲ್ಲಾ ರಾಜ್ಯಗಳ ಪುರಾತತ್ವ ಇಲಾಖೆಗಳೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿಯೇ ಇವೆ. ಹೀಗಾಗಿ ಕರ್ನಾಟದಲ್ಲಿಯೂ ಇದೇ ಇಲಾಖೆಯಲ್ಲಿಯೇ ಇರಲಿ ಎಂದು ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ದೇವರ ಕೊಂಡಾರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರಾ ಇಲಾಖೆ ವ್ಯಾಪ್ತಿಯಲ್ಲಿನ ಸ್ಮಾರಕಗಳ ಸಂರಕ್ಷಣಾಕಾರ್ಯ ಪ್ರವಾಸಿ ತಾಣಗಳಲ್ಲಿರುವ ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿರುವುದರಿಂದ ಈ ಇಲಾಖೆಯನ್ನು ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಗೆ ತರಲು ನಿರ್ಧರಿಸಿ, 2018 ರಲ್ಲಿ ಸೆಕ್ರೆಟರಿಯೇಟ್ ಮಟ್ಟದಲ್ಲಿ ವಿಲೀನಕ್ಕೆ ಒಪ್ಪಂದವಾಯಿತು. ಇದು ಸದ್ಯ ಸಚಿವಾಲಯ ಮಟ್ಟದಲ್ಲಿ ಆಗಿಲ್ಲ. ಅದು ಆಗುವುದೂ ಬೇಡ. ಯಾಕೆಂದರೆ ಯಾವ ಬೆಳವಣಿಗೆಗಳೂ ಕಾಣುತ್ತಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಪುರಾತತ್ವ ಇಲಾಖೆಯು ಪ್ರವಾಸೋದ್ಯಮ ಇಲಾಖೆಯೊಂದಿಗೆ ವಿಲೀನಗೊಂಡರೆ ಪಾರಂಪರಿಕ ಸ್ಥಳಗಳು ಪ್ರವಾಸಿ ತಾಣಗಳಾಗಲಿವೆ. ಉತ್ಖನನ ಹಾಗೂ ಅಧ್ಯಯನಕ್ಕೆ ಆದ್ಯತೆ ಸಿಗುತ್ತದೆ. ಕೋಟೆ, ಸ್ಮಾರಕ, ಐತಿಹಾಸಿಕ ದೇಗುಲಗಳ ಸಂರಕ್ಷಣೆಗೆ ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿ ಪುರಾತತ್ವ ಇಲಾಖೆ ಇತ್ತು. ಆದರೆ ಅದೆಲ್ಲವೂ ಹುಸಿಯಾಯಿತು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
800 ರಕ್ಷಿತ ಸ್ಮಾರಕಗಳು: ರಾಜ್ಯದಲ್ಲಿ ಪುರಾತತ್ವ ಇಲಾಖೆಯಡಿ 800 ರಕ್ಷಿತ ಸ್ಮಾರಕಗಳು, 25 ಸಾವಿರ ಇತರೆ ಸ್ಮಾರಕಗಳಿವೆ. ಇದಲ್ಲದೆ 27 ಸಾವಿರ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಿವೆ. ಒಂದು ಆರ್ಟ್ ಗ್ಯಾಲರಿ (ವೆಂಕಟಪ್ಪ ಆರ್ಟ್ಗ್ಯಾಲರಿ), ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ಸರಕಾರಿ ಮ್ಯೂಸಿಯಂ ಸೇರಿದಂತೆ ರಾಜ್ಯಾದ್ಯಂತ 16 ಮ್ಯೂಸಿಯಂಗಳಿವೆ. ಇದಲ್ಲದೆ ಪಾರಂಪರಿಕ ಕಟ್ಟಡಗಳು, ಸ್ಥಳಗಳು, ರಕ್ಷಿತ ವಸ್ತುಗಳು ಇತ್ಯಾದಿಗಳು ಸೇರುತ್ತವೆ.
ರಾಜ್ಯ ಪುರಾತತ್ವ ಇಲಾಖೆಯು ಶಾಸನಗಳ ಅಧ್ಯಯನ, ಪುರಾತತ್ವ ಸ್ಮಾರಕಗಳು, ಭೂಸರ್ವೇಕ್ಷಣೆ, ಉತ್ಖನನಗಳ ಅಧ್ಯಯನ ಇತ್ಯಾದಿಗಳನ್ನು ನಿರ್ವಹಿಸುತ್ತಿದೆ. ಇಲಾಖೆಗೆ ವಾರ್ಷಿಕ ಸುಮಾರು 100 ಕೋಟಿ ಅನುದಾನದ ಅಗತ್ಯವಿದೆ. ಆದರೆ ಸರಕಾರದಿಂದ ಸಿಗುತ್ತಿರುವುದು ಕೆಲವೇ ಕೋಟಿಗಳು ಮಾತ್ರ. ಆದರೆ ಮೂರ್ನಾಲ್ಕು ವರ್ಷಗಳಿಂದ 25 ಕೋಟಿ ಅನುದಾನ ಮೀಸಲಿಡುತ್ತಿದೆ. ಇದರಲ್ಲಿ ಶೇ. 50 ರಷ್ಟು ವೇತನಕ್ಕೆ ಬಳಕೆಯಾಗುತ್ತದೆ.
ಫೇಸ್ಬುಕ್ ಅಭಿಯಾನ: 1885ರಲ್ಲಿ ಅರಸರ ಆಳ್ವಿಕೆಯಲ್ಲಿ ಪುರಾತತ್ವ ಇಲಾಖೆ ಆರಂಭವಾಯಿತು. ಇದನ್ನು ಪ್ರವಾಸೋದ್ಯಮ ಇಲಾಖೆಯ ಹಿಡಿತದಿಂದ ತಪ್ಪಿಸಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮರಳಿಸಿ ಅಥವಾ ಸ್ವತಂತ್ರ ಇಲಾಖೆಯಾಗಿ ಬೆಳೆಯಲು ಬಿಡಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವೂ ನಡೆಯುತ್ತಿದೆ.
ಈ ಇಲಾಖೆಯ ಖರ್ಚಿನ ಬಾಬ್ತು ಎನ್ನುವುದು ಸಹಜ. ಆದರೆ ಇದು ದೊಡ್ಡ ಮೊತ್ತವಲ್ಲ. ಒಮ್ಮೆ ಸಂಸ್ಕೃತಿಯ ಸುಳುಹುಗಳು ಕಳಚಿದರೆ ನಮ್ಮ ಪರಂಪರೆ ನಾಶವಾದಂತೆ. ಪುನರಾರಂಭಿಸಲಾಗದು ಆಧುನೀಕರಣ, ನಗರೀಕರಣ, ವ್ಯಾಪಾರೀಕರಣದ ಹೆಸರಿನಲ್ಲಿ, ನಲುಗುತ್ತಿರುವ ಪ್ರಾಚೀನ ಸಂಸ್ಕೃತಿಯನ್ನು ಉಳಿಸಬೇಕಾದ್ದು ಸರಕಾರದ ಕರ್ತವ್ಯ. ಈ ಕುರಿತು ನಾನು ಫೇಸ್ಬುಕ್ ಅಭಿಯಾನ ಆರಂಭಿಸಿದ್ದೇನೆ ಎಂದು ಸ್ಮಾರಕಗಳ ಅಧ್ಯಯನಕಾರರಾದ ಪ್ರಭಾಕರ್ ಮನೆವಾರ್ತೆ ಹೇಳಿದ್ದಾರೆ.