ಕ್ಯಾಬ್ ಚಾಲಕರ ನಿರೀಕ್ಷೆ ಹುಸಿ: ಲಾಕ್ಡೌನ್ ಬಳಿಕ ಕ್ಯಾಬ್ ಗಳತ್ತ ಮುಖ ಮಾಡದ ಜನತೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.15: ಲಾಕ್ಡೌನ್ ತೆರವುಗೊಂಡ ಬಳಿಕ ಹಣ ಸಂಪಾದನೆಯ ನಿರೀಕ್ಷೆಯಲ್ಲಿದ್ದ ಓಲಾ, ಉಬರ್ ಟ್ಯಾಕ್ಸಿಗಳ ಚಾಲಕರಿಗೆ ನಿರೀಕ್ಷೆ ಹುಸಿಯಾಗಿದ್ದು, ಟ್ಯಾಕ್ಸಿಗಳನ್ನು ಆಧರಿಸುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ.
ರಾಜ್ಯಾದ್ಯಂತ ಕೊರೋನ ಸೋಂಕು ಹರಡದಂತೆ ವಿಧಿಸಿದ್ದ ಲಾಕ್ಡೌನ್ಅನ್ನು ಹಂತ ಹಂತವಾಗಿ ಸಡಿಲಿಕೆ ಮಾಡಲಾಗುತ್ತಿದ್ದು, ಜನಜೀವನವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ಹೀಗಾಗಿ, ಜನ ಸಂಚಾರಕ್ಕೆ ಅನುಕೂಲವಾಗುವಂತೆ ಸಾರಿಗೆ ಸೇವೆಗೆ ಅವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಸಂಚರಿಸುವ ಓಲಾ, ಊಬರ್ ಕ್ಯಾಬ್ಗಳು ಬಹಳಷ್ಟು ನಿರೀಕ್ಷೆಯನ್ನಿಟ್ಟುಕೊಂಡು, ಲಾಕ್ಡೌನ್ ಸಂದರ್ಭದಲ್ಲಿ ಇಳಿಕೆ ಕಂಡ ಆದಾಯವನ್ನು ಸರಿದೂಗಿಸಿಕೊಳ್ಳುವ ಆಲೋಚನೆಯಲ್ಲಿದ್ದ ಕ್ಯಾಬ್ ಚಾಲಕ ಹಾಗೂ ಮಾಲಕರಿಗೆ ನಿರಾಸೆಯುಂಟಾಗುತ್ತಿದೆ.
ಕೊರೋನ ಸೋಂಕಿಗೆ ಸಾಮಾನ್ಯ ಜನರು ಭಯಭೀತರಾಗಿದ್ದಾರೆ. ಅಲ್ಲದೆ, ಎಲ್ಲೆಡೆ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಅಧಿಕವಾಗುತ್ತಿದ್ದು, ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದೆ. ಅಲ್ಲದೆ, ರಾಜಧಾನಿ ಬೆಂಗಳೂರಿನಲ್ಲಿ ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಯಾರೂ ಆಟೋ, ಕ್ಯಾಬ್ಗಳನ್ನು ಹತ್ತಲು ಮುಂದಾಗುತ್ತಿಲ್ಲ. ಬದಲಿಗೆ, ಬಹುತೇಕರು ಸುರಕ್ಷತೆಯ ದೃಷ್ಟಿಯಿಂದ ಸ್ವಂತ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ.
ಓಲಾ ಹಾಗೂ ಊಬರ್ ಚಾಲಕರ ಆದಾಯವೇ ನಿಂತು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಲಾಕ್ಡೌನ್ ತೆರವಾದ ಬಳಿಕ ಸಂಚಾರ ಆರಂಭಿಸಿದ ಹಿನ್ನೆಲೆಯಲ್ಲಿ ಕ್ಯಾಬ್ಗಳಲ್ಲಿ ಸಂಚಾರ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ದಿನಪೂರ್ತಿ ಕಾದರೂ ಕನಿಷ್ಠ ಆದಾಯವೂ ಸಿಗದೇ ಪರದಾಡುವಂತಾಗಿದೆ. ಅಲ್ಲದೆ, ನಿರೀಕ್ಷಿತ ಆದಾಯವಿಲ್ಲದಿದ್ದರೂ ಕಂಪೆನಿಯಲ್ಲಿ ಕಾರ್ಯನಿರ್ವಹಿಸುವವರಿಗೆ ವೇತನಕ್ಕೂ ಕತ್ತರಿ ಬೀಳುವ ಆತಂಕ ಎದುರಾಗಿದೆ ಎಂದು ಕ್ಯಾಬ್ ಚಾಲಕ ನಾಗರಾಜ ಅಭಿಪ್ರಾಯಿಸಿದ್ದಾರೆ.
ಚಾಲಕರ ಗೋಳು ಯಾರಿಗೆ ಹೇಳೋಣ: ಲಾಕ್ಡೌನ್ ಬಳಿಕ ಕ್ಯಾಬ್ಗಳು ರಸ್ತೆಗಿಳಿದಿದ್ದು, ಓಲಾ, ಊಬರ್ ಚಾಲಕರು ತಮ್ಮ ವಾಹನಕ್ಕೆ ಸೋಂಕು ನಿವಾರಕಗಳು ಹಾಗೂ ಸ್ಯಾನಿಟೈಸರ್ಗಳನ್ನು ಬಳಸಬೇಕಾಗುವುದು ಹಾಗೂ ಪ್ರತೀ ಸವಾರಿಗೂ ಮುಂಚಿತವಾಗಿ ಗಾಡಿಯ ಸ್ವಚ್ಛತೆಯನ್ನು ಮಾಡಬೇಕಾಗಿದ್ದು, ಅವುಗಳ ವೆಚ್ಚವನ್ನೂ ಚಾಲಕರೇ ಭರಿಸಬೇಕಾಗುತ್ತದೆ.
ಈ ಮೊದಲು ದಿನದಲ್ಲಿ ನಾಲ್ಕೈದು ಬಾರಿ ಪ್ರಯಾಣ ಕೈಗೊಳ್ಳುತ್ತಿದ್ದವರು ಹಾಗೂ ಅನೇಕ ಮುಂಗಡ ಕಾಯ್ದಿರಿಸುವಿಕೆಯನ್ನು ಹೊಂದಿದವರೂ ಈಗ ಒಂದು ಟ್ರಿಪ್ ದೊರಕಿದರೆ ಸಂತಸಪಡಬೇಕಾದ ಸ್ಥಿತಿಗೆ ತಲುಪಿದ್ದೇವೆ. ಈ ಮೊದಲು ದಿನದಲ್ಲಿ 3ರಿಂದ 4 ಸಾವಿರದವರೆಗೆ ದುಡಿಯುತ್ತಿದ್ದ ನಾವು ಈಗ ದಿನಕ್ಕೆ 300 ರೂ.ಗಳು ಸಿಕ್ಕುವುದೇ ಕಷ್ಟವಾಗಿ ಹೋಗಿದೆ. ಅದರಲ್ಲಿ ಅರ್ಧದಷ್ಟು ವಾಹನಕ್ಕೆ ಸ್ಯಾನಿಟೈಸರ್ ಖರೀದಿಸಲು ಬಳಸುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯವೂ ದೊರೆಯುತ್ತಿಲ್ಲ ಎಂದು ಓಲಾ ಚಾಲಕ ವೆಂಕಟೇಶಪ್ಪ ನೊಂದು ನುಡಿದಿದ್ದಾರೆ.
ಸಾಲ ಮಾಡಿ ವಾಹನ ಖರೀದಿ: ಸ್ವಂತ ಖರ್ಚಿನಲ್ಲಿ ವಾಹನ ಖರೀದಿಸಿದವರ ಬದುಕು ದುಸ್ತರವಾಗಿದೆ. ಇನ್ನು, ಸಾಲ ಮಾಡಿ ವಾಹನ ಖರೀದಿ ಮಾಡಿದವರಂತೂ ಸಾಲ ಮರು ಪಾವತಿ ಮಾಡಲು ಕಷ್ಟ ಪಡುತ್ತಿದ್ದಾರೆ. ಜನರು ಅಧಿಕ ಸಂಖ್ಯೆಯಲ್ಲಿ ಸ್ವಂತ ವಾಹನಗಳನ್ನು ಬಳಕೆ ಮಾಡುತ್ತಿರುವುದರಿಂದ ಕ್ಯಾಬ್ಗಳ ಕಡೆಗೆತಲೆ ಹಾಕುತ್ತಿಲ್ಲ. ಸ್ವಂತ ಖರ್ಚಿನಲ್ಲಿ ಕ್ಯಾಬ್ಗಳನ್ನು ಪ್ರಾರಂಭ ಮಾಡಿದ್ದು, ತೀವ್ರವಾದ ನಷ್ಟಕ್ಕೊಳಗಾಗುತ್ತಿದ್ದಾರೆ. ಸವಾರಿಗಾಗಿ ಕಾಯುತ್ತಾ ಕುಳಿಯುವಂತಾಗಿದೆ ಎಂದು ಓಲಾ, ಊಬರ್ ಚಾಲಕರು ಹೇಳಿದ್ದಾರೆ.
ಹೊರ ಬರದ ಜನತೆ: ಕೊರೋನ ಸೋಂಕಿನ ಭಯದಿಂದ ಜನ ಹೊರಗೆ ಬರಲು ಹೆದರುತ್ತಿದ್ದಾರೆ. ಮನೆಯಲ್ಲೇ ಇರುವವರ ಸಂಖ್ಯೆ ಅಧಿಕವಾಗಿದ್ದು, ಇನ್ನೂ ಅಗತ್ಯ ಕೆಲಸಕ್ಕಾಗಿ ಹೊರ ಬರುವವರೂ ತಮ್ಮ ಸ್ವಂತ ವಾಹನದಲ್ಲೇ ಓಡಾಡುತ್ತಿರುವುದರಿಂದ ಓಲಾ, ಊಬರ್ ನಲ್ಲಿ ಪ್ರಯಾಣಿಸುತ್ತಿಲ್ಲ. ಒಂದೇ ದಿನ 15 ರಿಂದ 18 ಟ್ರಿಪ್ಗಳನ್ನು ಹೋಗುತ್ತಿದ್ದವರು ಈಗ ಒಂದು ಟ್ರಿಪ್ಗೆ ಸಮಾಧಾನ ಪಡುವಂತಾಗಿದೆ ಎಂದು ಕ್ಯಾಬ್ ಮಾಲಕ ಹಾಗೂ ಚಾಲಕ ನರಸಿಂಹಪ್ಪ ನುಡಿದರು.
ಸತತ ಆರು ಗಂಟೆಗಳ ಕಾಲ ಆನ್ಲೈನ್ನಲ್ಲಿದ್ದರೂ ಕೂಡ ಕನಿಷ್ಟ ಪಕ್ಷ ಒಂದೇ ಒಂದು ಸವಾರಿಯೂ ದೊರಕದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ಈ ಹಿಂದೆ ಲಾಭದಿಂದ ನಡೆಯುತ್ತಿದ್ದ ಬ್ಯುಸಿನೆಸ್ ನಷ್ಟದತ್ತ ಮುಖ ಮಾಡಿದೆ.
-ಶ್ರೀಕಂಠಯ್ಯ, ಓಲಾ ಕ್ಯಾಬ್ ಚಾಲಕ