ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವರ ವಿರುದ್ಧ ಪ್ರಕರಣ ದಾಖಲು: ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್
ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ವಿಚಾರ
ಪ್ರತಿಭಟನೆಯ ದೃಶ್ಯ
ಬೆಂಗಳೂರು, ಜೂ.29: ಪೊಲೀಸ್ ಇಲಾಖೆ ಅನುಮತಿ ಇಲ್ಲದೆ, ಕಾಂಗ್ರೆಸ್ ಪಕ್ಷದಿಂದ ಸೈಕಲ್ ಜಾಥಾ ನಡೆಸಿ ಪ್ರತಿಭಟನೆ ನಡೆಸಿರುವ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಹಲವು ಮುಖಂಡರ ವಿರುದ್ಧ ಪ್ರಕರಣ ದಾಖಲಿಸಲಾಗುವುದೆಂದು ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾಥಾ ನಡೆಸುವ ಸಲುವಾಗಿ ಕಾಂಗ್ರೆಸ್ ಕಾರ್ಯದರ್ಶಿಯೊಬ್ಬರು ಅನುಮತಿಗಾಗಿ ಮನವಿ ಸಲ್ಲಿಸಿದ್ದರು. ಆದರೆ, ಕೋವಿಡ್-19 ಹಿನ್ನೆಲೆ ಅನುಮತಿ ನಿರಾಕರಿಸಿ ನೋಟಿಸ್ ಕೂಡ ನೀಡಲಾಗಿತ್ತು. ಇದನ್ನು ಲೆಕ್ಕಿಸದ ಮುಖಂಡರು ಕಾನೂನು ಉಲ್ಲಂಘನೆ ಮಾಡಿ ಸೈಕಲ್ ಜಾಥಾ ನಡೆಸಿದ್ದಾರೆ. ಈ ಸಂಬಂಧ ಕಾನೂನು ತಜ್ಞರ ಜೊತೆ ಚರ್ಚಿಸಿ ಪ್ರತಿಭಟನಾಕಾರರ ವಿರುದ್ಧ ಎನ್ಡಿಎಂಎ ಕಾಯಿದೆ ಅಡಿ ಪ್ರಕರಣ ದಾಖಲಿಸಲಾಗುವುದೆಂದು ಹೇಳಿದರು.
ಜಾಥಾ ಪರಿಣಾಮದಿಂದಾಗಿ ಕಬ್ಬನ್ ಪಾರ್ಕ್ ಸುತ್ತಮುತ್ತ ಸಂಚಾರ ದಟ್ಟಣೆ ಕೂಡ ಉಂಟಾಗಿತ್ತು. ಮತ್ತೊಂದೆಡೆ ದಿನೇ ದಿನೇ ಕೊರೋನ ಪ್ರಕರಣಗಳು ಹರಡುತ್ತಿರುವುದರಿಂದ ಪೊಲೀಸರು ದೂರದಿಂದಲೇ ಪರಿಸ್ಥಿತಿ ನಿಭಾಯಿಸಿದರು ಎಂದು ಅವರು ತಿಳಿಸಿದರು.