ಪತ್ನಿಯನ್ನು ಕಲ್ಲಿನ ಕೋರೆಗೆ ದೂಡಿ ಕೊಲೆಗೈದ ಪತಿ
ಬಜ್ಪೆ ಸಮೀಪದ ಕರಂಬಾರ್ನಲ್ಲಿ ನಡೆದ ಘಟನೆ
ಮಂಗಳೂರು: ಕಾವೂರಿನ ಟಿಪ್ಪರ್ ಚಾಲಕ ಗಣೇಶ್ (40) ತನ್ನ ಪತ್ನಿ ಶಾಂತಾ (30) ಅವರನ್ನು ಬಜಪೆ ಸಮೀಪದ ಕರಂಬಾರು ಅಂತೋಣಿಕಟ್ಟೆಯ ಕಲ್ಲಿನ ಕೋರೆಗೆ ದೂಡಿ ಹಾಕಿ ಕೊಲೆ ಮಾಡಿ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದೆ.
ಗಣೇಶ್ ಹಾಸನ ಮೂಲದ ನಿವಾಸಿಯಾಗಿದ್ದು, ಕಾವೂರು ಪರಿಸರದಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಪತ್ನಿ ಶಾಂತಾ ಕಾಸರಗೋಡು ಮೂಲದವರು. ದಂಪತಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ ಇದ್ದಾಳೆ. ಈ ಹಿಂದೆ ಕಾವೂರು ಸಮೀಪದ ಮರಕಡದಲ್ಲಿ ಹಾಗೂ ಇತ್ತೀಚೆಗೆ ಕಾವೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪತಿ- ಪತ್ನಿ ಮಧ್ಯೆ ವಿರಸ ಉಂಟಾದ ಕಾರಣ ಪತ್ನಿ ಮಕ್ಕಳನ್ನು ಕರೆದುಕೊಂಡು ತವರಿಗೆ ಹೋಗಿದ್ದು, ಕೆಲವು ಸಮಯ ಪ್ರತ್ಯೇಕವಾಗಿ ವಾಸವಾಗಿದ್ದರು. ಇತ್ತೀಚೆಗೆ ಆತ ಆಕೆಯ ಮನೆಗೆ ತೆರಳಿ ಮಾತುಕತೆ ನಡೆಸಿ ಕಾವೂರಿಗೆ ಕರೆಸಿಕೊಂಡಿದ್ದನು ಎನ್ನಲಾಗಿದೆ.
ಜು. 1 ರಂದು ಸಂಜೆ ಗಣೇಶ್ ಪತ್ನಿ ಶಾಂತಾಳನ್ನು ಕರೆದುಕೊಂಡು ಹೊರಗೆ ಹೋಗಿದ್ದು, ವಾಪಸ್ ಬಂದಿರಲಿಲ್ಲ. ಮನೆಯಲ್ಲಿ ಮಕ್ಕಳು ಮತ್ತು ಅಜ್ಜಿ (ಶಾಂತಾ ಅವರ ತಾಯಿ) ಇದ್ದರು. ಜು. 2 ರಂದು ಸಂಜೆ ಗಣೇಶ್ ತನ್ನ ಮನೆಗೆ ಫೋನ್ ಮಾಡಿ ಪತ್ನಿಯನ್ನು ತಾನು ಕೊಲೆ ಮಾಡಿರುವುದಾಗಿ ಅತ್ತೆಗೆ ತಿಳಿಸಿದ್ದಾನೆ. ಅತ್ತೆ ಬಳಿಕ ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಆರೋಪಿ ಗಣೇಶ್ ತನ್ನ ಪತ್ನಿಯನ್ನು ತಾನು ಟಿಪ್ಪರ್ನಲ್ಲಿ ಕಲ್ಲು ಸಾಗಾಟ ಕೆಲಸ ಮಾಡುತ್ತಿದ್ದ ಕರಂಬಾರಿನ ಕಲ್ಲಿನ ಕೋರೆಗೆ ದೂಡಿ ಹಾಕಿದ್ದು ಕಾವೂರು ಪೊಲೀಸರು ಗುರುವಾರ ರಾತ್ರಿ ಕರಂಬಾರಿಗೆ ತೆರಳಿ ಶಾಂತಾ ಅವರ ಶವವನ್ನು ಪತ್ತೆ ಮಾಡಿ ಅದನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಘಟನೆಗೆ ನೈಜ ಕಾರಣ ತಿಳಿದು ಬಂದಿಲ್ಲ.
ಆರೋಪಿ ಗಣೇಶನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.