ಕಾರ್ಕಳ: ವಿದ್ಯುತ್ ಮೀಟರ್ ರೀಡರ್ ಗುತ್ತಿಗೆ ಕಾರ್ಮಿಕರಿಂದ ಧರಣಿ
ಕಾರ್ಕಳ, ಜು.4: ವಿದ್ಯುತ್ ತಿದ್ದುಪಡಿ ಮಸೂದೆ 2020ನ್ನು ಹಿಂಪಡೆಯು ವಂತೆ ಆಗ್ರಹಿಸಿ ಅಖಿಲ ಭಾರತ ವಿದ್ಯುತ್ ನೌಕರರ ಒಕ್ಕೂಟ(ಸಿಐಟಿಯು) ಕಾರ್ಕಳ ಉಪವಿಭಾಗದ ನೇತೃತ್ವದಲ್ಲಿ ಮೀಟರ್ ರೀಡರ್ ಗುತ್ತಿಗೆ ಕಾರ್ಮಿಕರು ಜು.3ರಂದು ಮೆಸ್ಕಾಂ ಕಾರ್ಕಳ ಉಪವಿಭಾಗ ಕಚೇರಿಯ ಮುಂದೆ ಧರಣಿ ನಡೆಸಿದರು.
ಎಲ್ಲ ವಿದ್ಯುತ್ ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಎಲ್ಲ ವಿದ್ಯುತ್ ಗುತ್ತಿಗೆ ಕಾರ್ಮಿಕರಿಗೆ ಲಾಕ್ಡೌನ್ ಅವಧಿಯಲ್ಲಿ ಮಾಸಿಕ 7500ರೂ. ಆರು ತಿಂಗಳು ನೀಡಬೇಕು. ವಿದ್ಯುತ್ ಗುತ್ತಿಗೆ ಕಾರ್ಮಿಕರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಯಾವುದೇ ಕಾರ್ಮಿಕ ಕಾನೂನು ಗಳನ್ನು ಬದಲಾಯಿಸಬಾರದು.
ಇಂಧನ ಇಲಾಖೆಯಲ್ಲಿ ನೇರ ನೇಮಕಾತಿ ನಿಲ್ಲಿಸಬೇಕು. ಎಲ್ಲ ವಿದ್ಯುತ್ ಗುತ್ತಿಗೆ ಕಾರ್ಮಕರಿಗೆ ಕನಿಷ್ಠ ಮಾಸಿಕ ವೇತನ 21ಸಾವಿರ ರೂ. ನೀಡಬೇಕು. ಮೀಟರ್ ರೀಡರ್ಗೆ ಗರಿಷ್ಠ ಒಂದು ತಿಂಗಳಿಗೆ ಗ್ರಾಮೀಣ ಪ್ರದೇಶಕ್ಕೆ 1200 ಹಾಗೂ ನಗರ ಪ್ರದೇಶಕ್ಕೆ 1500 ಮಾಪಕ ನಿಗದಿಪಡಿಸಬೇಕು. ವಿದ್ಯುತ್ ಇಲಾಖೆಯ ಗುತ್ತಿಗೆಯನ್ನು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಇವರಿಗೆ ನೀಡಬೇಕು. ವಿದ್ಯುತ್ ಅಪಘಾತಗಳಲ್ಲಿ ಮೃತಪಟ್ಟವರಿಗೆ ಮತ್ತು ಅಂಗವಿಕಲರಾದವರಿಗೆ ಪರಿಹಾರ ನೀಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.