ಜನರನ್ನು ಬದುಕಿಸಿ ನಿಮ್ಮ ಪಾಪ ತೊಳೆದುಕೊಳ್ಳಿ: ಬಿಎಸ್ವೈ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಬೆಂಗಳೂರು, ಜು. 4: ಕೊರೋನ ಸೋಂಕಿತರ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಹೊಂದಿಸುವುದೇ ಸಮಸ್ಯೆಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ ಅಧಿಕಾರದ ಕುರ್ಚಿ ಖರೀದಿಗೆ ಸಂಗ್ರಹಿಸಿದ ದುಡ್ಡಲ್ಲಿ ಶಿಲ್ಕು ಉಳಿಸಿದ್ದರೆ ಅದನ್ನಾದರೂ ಬಳಸಿಕೊಂಡು ಹಾಸಿಗೆ-ಸಲಕರಣೆ ಖರೀದಿಸಿ ಜನರನ್ನು ಬದುಕಿಸಿ, ನಿಮ್ಮ ಪಾಪ ತೊಳ್ಕೊಳ್ಳಿ' ಎಂದು ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಶನಿವಾರ ಸರಣಿ ಟ್ವೀಟ್ ಮಾಡಿರುವ ಅವರು, ಕೊರೋನ ಸೋಂಕು ನಿಯಂತ್ರಣಕ್ಕೆ ಸಿದ್ಧತೆ ಮಾಡಿಕೊಳ್ಳಲಾಗದ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಕೊರೋನ ಸೋಂಕು ಪರೀಕ್ಷೆಯ ಸಂಖ್ಯೆ ಕಡಿಮೆ ಮಾಡುತ್ತಿರುವುದು ಜನದ್ರೋಹ. ಸೋಂಕಿನ ಲಕ್ಷಣಗಳೇ ಇಲ್ಲದಿರುವ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲು ಹೆಚ್ಚು ಹೆಚ್ಚು ಪರೀಕ್ಷೆ ನಡೆಸುವುದೊಂದೇ ದಾರಿ' ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ.
ಖಾಸಗಿ ಆಸ್ಪತ್ರೆಗಳು ರಾಜ್ಯ ಸರಕಾರದ ಮಾತಿಗೆ ಕವಡೆಕಾಸಿ ಬೆಲೆಯನ್ನೂ ಕೊಡದೆ ಬಡ ರೋಗಿಗಳ ಸುಲಿಗೆ ನಡೆಸುತ್ತಿವೆ. ಖಾಸಗಿ ಆಸ್ಪತ್ರೆಗಳು ಸೋಂಕಿತರನ್ನು ಸೇರಿಸಿಕೊಳ್ಳುತ್ತಿಲ್ಲ, ಸೇರಿಸಿಕೊಂಡರೂ ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ. ಇವುಗಳ ವಿರುದ್ಧ ಕ್ರಮಕ್ಕೆ ಹಿಂಜರಿಕೆ ಏಕೆ?' ಎಂದು ಸಿದ್ದರಾಮಯ್ಯ, ಯಡಿಯೂರಪ್ಪನವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.