ಮಂಗಳೂರು ತಲುಪಿದ ಕೆಸಿಎಫ್ ಮೂರನೆ ಚಾರ್ಟರ್ಡ್ ವಿಮಾನ
ಮಂಗಳೂರು: ಯುಎಇಯಲ್ಲಿ ಸಂಕಷ್ಟಕ್ಕೊಳಗಾಗಿರುವ ಕನ್ನಡಿಗರನ್ನು ತಾಯ್ನಾಡಿಗೆ ಕರೆತರುವ ಭಾಗವಾಗಿ ಅನಿವಾಸಿ ಕನ್ನಡಿಗರ ಸಂಘಟನೆ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ಆಯೋಜಿಸಿದ ಮೂರನೆ ಚಾರ್ಟರ್ಡ್ ವಿಮಾನವು ಮಂಗಳೂರು ವಿಮಾನ ನಿಲ್ದಾಣಕ್ಕೆ ರವಿವಾರ ಮಧ್ಯಾಹ್ನ ಬಂದಿಳಿದಿದೆ.
173 ಪ್ರಯಾಣಿಕರಿದ್ದ ಏರ್ ಅರೇಬಿಯಾ ವಿಮಾನವು ಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 7ಗಂಟೆಗೆ ಹೊರಟು ಮಧ್ಯಾಹ್ನ 12 ಗಂಟೆಗೆ ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಎಲ್ಲರನ್ನೂ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ ಎಂದು ಕೆಸಿಎಪ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ ತಿಳಿಸಿದ್ದಾರೆ.
ಈಗಾಗಲೇ ಮೂರು ಚಾರ್ಟರ್ಡ್ ವಿಮಾನಗಳಲ್ಲಿ 493 ಸಂಕಷ್ಟ ಪ್ರಯಾಣಿಕರನ್ನು ಊರಿಗೆ ತಲುಪಿಸಲಾಗಿದೆ. ಪ್ರಯಾಣಿಕರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಸಂಕಷ್ಟಕ್ಕೀಡಾಗಿ ಬಾಕಿ ಉಳಿದಿರುವ ಕನ್ನಡಿಗರು ಹೆಚ್ಚಿನ ವಿಮಾನಗಳಿಗೆ ಬೇಡಿಕೆ ಇಟ್ಟಿದ್ದು, ಈ ಕುರಿತು ಚರ್ಚಿಸಿ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮಂಗಳೂರಲ್ಲಿ ಸ್ವಾಗತ:
ಮುಸ್ಲಿಂ ಜಮಾಅತ್ ನಾಯಕರಾದ ಹಮೀದ್ ಬಜ್ಪೆ, ಅಶ್ರಫ್ ಕಿನಾರಾ ನೇತೃತ್ವದಲ್ಲಿ ಊರಿಗೆ ತಲುಪಿದ ಪ್ರಯಾಣಿಕರನ್ನು ಆದ್ದೂರಿಯಾಗಿ ಸ್ವಾಗತಿಸಲಾಯಿತು.
ಎಸ್ಸೆಸ್ಸೆಫ್ ಬ್ಲಡ್ ಸೈಬೊ, ಎಸ್ವೈಎಸ್ ಸ್ವಯಂಸೇವಕರು ಪ್ರಯಾಣಿಕರಿಗೆ ಬೇಕಾದ ಆಹಾರ ಕಿಟ್, ಕ್ವಾರಂಟೈನ್ ಕೇಂದ್ರಗಳು, ಕ್ವಾರಂಟೈನ್ ಕೇಂದ್ರಗಳತ್ತ ಅವರನ್ನು ಸಾಗಿಸಲು ಬೇಕಾದ ವಾಹನಗಳು ಹಾಗೂ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಯಿತು