ಚಿತ್ತೂರಿನಲ್ಲಿ ಅಕ್ರಮ ಮರಳು ದಾಸ್ತಾನು: ಪ್ರಕರಣ ದಾಖಲು
ಕುಂದಾಪುರ, ಜು.7: ಚಿತ್ತೂರು ಗ್ರಾಮದ ಮೂರು ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ ಮರಳಿಗೆ ಸಂಬಂಧಿಸಿ ಉಡುಪಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಕುಮಾರಿ ನೀಡಿದ ದೂರಿನಂತೆ ಕುಂದಾಪುರ ಎರಡನೆ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ತೂರು ಗ್ರಾಮದ ಜೆಡ್ಡು ಎಂಬಲ್ಲಿ ಅನಧಿಕೃತವಾಗಿ ಮರಳು ದಾಸ್ತಾನಿಟ್ಟಿ ರುವ ಬಗ್ಗೆ ಜೂ.30ರಂದು ಬಂದ ಮಾಹಿತಿಯಂತೆ ದಾಳಿ ನಡೆಸಿದ ಭೂ ವಿಜ್ಞಾನಿ ಸಂಧ್ಯಾ ಕುಮಾರಿ ನೇತೃತ್ವದ ಅಧಿಕಾರಿಗಳ ತಂಡ, ಒಟ್ಟು ಮೂರು ಕಡೆಗಳಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಅಂದಾಜು 145 ಮೆಟ್ರಿಕ್ ಟನ್ನಷ್ಟು ಮರಳನ್ನು ವಶಪಡಿಸಿಕೊಂಡಿದೆ.
ಸ್ಥಳೀಯರಾದ ಶಿವಪ್ರಸಾದ್ ಎಂಬಾತ ತನ್ನ ಪಟ್ಟಾ ಜಾಗದಲ್ಲಿ ಪ್ರತ್ಯೇಕವಾಗಿ 20ಮೆಟ್ರಿಕ್ ಟನ್ ಹಾಗೂ ಅಂದಾಜು 100 ಮೆಟ್ರಿಕ್ ಟನ್ ದಾಸ್ತಾನು ಇರಿಸಿರುವುದು ಕಂಡುಬಂದಿದೆ. ಇದನ್ನು ಸಮೀಪದ ಚಕ್ರಾ ನದಿಯಿಂದ ತೆಗೆದಿರುವುದಾಗಿ ದೂರಲಾಗಿದೆ. ಅದೇ ರೀತಿ ಅಲ್ಲೇ ಸಮೀಪದ ಸರಕಾರಿ ಜಾಗದಲ್ಲಿ 25 ಮೆಟ್ರಿಕ್ ಟನ್ ಮರಳು ದಾಸ್ತಾನು ಇರಿಸಲಾಗಿದೆ. ಇವುಗಳ ಒಟ್ಟು ಮೌಲ್ಯ 94,250ರೂ. ಎಂದು ಅಂದಾಜಿಸಲಾಗಿದೆ. ಆರೋಪಿ ವಿರುದ್ಧ ಕಾನೂನು ಕ್ರಮ ಜರಗಿಸಿ ಶಿಕ್ಷೆ ವಿಧಿಸುವಂತೆ ಭೂ ವಿಜ್ಞಾನಿ ಸಂಧ್ಯಾ ಕುಮಾರಿ ದೂರಿನಲ್ಲಿ ತಿಳಿಸಿದ್ದಾರೆ.