ಕೊರೋನ ನಿರ್ವಹಣೆ: ಬಿಬಿಎಂಪಿಗೆ 21.42 ಕೋಟಿ ರೂ. ಬಿಡುಗಡೆ ಮಾಡಿದ ರಾಜ್ಯ ಸರಕಾರ
ಬೆಂಗಳೂರು, ಜು.8: ರಾಜ್ಯ ಸರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನ ನಿರ್ವಹಣೆಗೆ ಮಾನವ ಸಂಪನ್ಮೂಲ ಒದಗಿಸಲು 21.42 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
ರಾಜ್ಯ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಲಕ್ಷ್ಮೀ ಸಾಗರ್ ಎನ್.ಕೆ ಅವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪಾಲಿಕೆ ವ್ಯಾಪ್ತಿಯಲ್ಲಿ 10 ಸಾವಿರ ರೋಗಿಗಳನ್ನು 6 ತಿಂಗಳುಗಳ ಅವಧಿಗೆ ನಿರ್ವಹಣೆ ಮಾಡಲು, ವೈದ್ಯರು, ನರ್ಸ್ ಗಳು, ಸಹಾಯಕರು ಮೊದಲಾದ ಸಿಬ್ಬಂದಿಗಳನ್ನು ತಾತ್ಕಾಲಿಕ ನೇಮಕ ಮಾಡಿಕೊಳ್ಳಲು 21.42 ಕೋಟಿ ರೂ. ಅನ್ನು ಬಿಬಿಎಂಪಿಯ ಸ್ವಂತ ನಿಧಿಯಿಂದ ಭರಿಸಲು ಷರತ್ತಿನೊಂದಿಗೆ ಅನುಮೋದನೆ ನೀಡಿ ಆದೇಶ ಮಾಡಿದೆ.
ರಾಜ್ಯ ಸರಕಾರ 100 ಕೊರೋನ ಸೋಂಕಿರಿಗೆ ಒಬ್ಬ ಡಾಕ್ಟರ್ ನೇಮಕ ಮಾಡಿಕೊಳ್ಳಲಿದ್ದು, ಇವರು ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಇನ್ನು 50 ಸೋಂಕಿತರಿಗೆ ಒಬ್ಬ ನರ್ಸ್ ನೇಮಿಸಿಕೊಳ್ಳಲಾಗುತ್ತಿದ್ದು, ಇವರು ದಿನದಲ್ಲಿ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. 100 ಸೋಂಕಿತರಿಗೆ ಒಬ್ಬ ಡಿ-ವರ್ಗದ ಸಹಾಯಕ ಸಿಬ್ಬಂದಿ ನೇಮಿಸಿಕೊಳ್ಳಲಿದ್ದು, ಇವರು ದಿನದಲ್ಲಿ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಇವರ ನೇಮಕ ಮಾಡಿಕೊಳ್ಳಲು ರಾಜ್ಯ ಸರಕಾರ ಆದೇಶಿಸಿದೆ.