ಬಂಧಿಸಲು ತೆರಳಿದ್ದ ವೇಳೆ ಪೋಲಿಸರ ಮೇಲೆ ಹಲ್ಲೆ ಯತ್ನ: ಮೂವರು ಆರೋಪಿಗಳ ಬಂಧನ
ಬೆಂಗಳೂರು, ಜು.9: ದರೋಡೆಗೆ ಯತ್ನಿಸಿದ್ದವರನ್ನು ಬಂಧಿಸಲು ತೆರಳಿದ್ದ ವೇಳೆ ಪೋಲಿಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ವಿನಾಯಕ್ ನಗರದ ಲಕ್ಷ್ಮೀಕಾಂತ್(20), ಹೆಸರಘಟ್ಟ ನಿವಾಸಿ ಆನಂದ್(20), ಚಿಕ್ಕಬಿದರುಕಲ್ಲು ನಿವಾಸಿ ರಾಕೇಶ್(21) ಎಂದು ಗುರುತಿಸಲಾಗಿದೆ.
ಹೆಸರಘಟ್ಟ ಬಳಿ ಐವರ ಗುಂಪೊಂದು ದರೋಡೆಗೆ ಯತ್ನಿಸುತ್ತಿದ್ದ ಖಚಿತ ಮಾಹಿತಿ ಕಲೆ ಹಾಕಿದ ಪೋಲಿಸರು ಬಂಧನಕ್ಕೆ ಮುಂದಾಗಿದ್ದಾರೆ. ಈ ವೇಳೆ ದರೋಡೆಕೊರರು ಪೋಲಿಸರ ಮೇಲೆ ಲಾಂಗ್, ಡ್ಯಾಗರ್, ಚಾಕು ಹಾಗೂ ದೊಣ್ಣೆಗಳನ್ನು ಬೀಸಲು ಯತ್ನಿಸಿದ್ದಾರೆ. ಅದೃಷ್ಟವಶಾತ್ ಪೋಲಿಸರು ಪಾರಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದರು.
ಕೂಡಲೇ ಓರ್ವನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ದರೋಡೆಕೋರರ ತಂಡದ ಬಗ್ಗೆ ಮಾಹಿತಿ ದೊರಕಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ದರೋಡೆಕೊರರ ಜೊತೆಗಿದ್ದ ಚಂದ್ರಕಾಂತ್ ಮತ್ತು ಸತೀಶ್ ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ಬಲೆ ಬೀಸಿದ್ದಾರೆ.
ಈ ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಠಾಣಾ ಪೋಲಿಸರು ಆರೋಪಿಗಳ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.