ಬೆಂಗಳೂರು: ಆಟವಾಡುತ್ತಿದ್ದಾಗ ಆಯತಪ್ಪಿ ಬಿದ್ದು ರಾಜಕಾಲುವೆಯಲ್ಲಿ ಕೊಚ್ಚಿಹೋದ ಬಾಲಕಿ
ಬೆಂಗಳೂರು, ಜು.10: ಮನೆಯ ಮುಂದೆ ಆಟವಾಡುತ್ತಿದ್ದಾಗ ಆಯತಪ್ಪಿ ಬಿದ್ದು ಮಾರತಹಳ್ಳಿಯ ರಾಜಕಾಲುವೆಯಲ್ಲಿ ಬಾಲಕಿಯೊಬ್ಬಳು ಕೊಚ್ಚಿ ಹೋದ ಘಟನೆ ಶುಕ್ರವಾರ ಮಂತ್ರಿ ಅಪಾರ್ಟ್ಮೆಂಟ್ ಬಳಿ ನಡೆದಿದೆ.
ನಿತ್ಯಾನಂದ ಎಂಬವರ ಮಗಳು ಮೊನಾಲಿಕ(6) ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ ಎಂದು ತಿಳಿದುಬಂದಿದೆ.
ಮೂಲತಃ ಅಸ್ಸಾಂನವರಾದ ನಿತ್ಯಾನಂದ ಕುಟುಂಬ, ಮಂತ್ರಿ ಅಪಾರ್ಟ್ಮೆಂಟ್ ಹಿಂಭಾಗದ ಗುಡಿಸಿಲಿನಲ್ಲಿ ವಾಸವಿತ್ತು. ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮೊನಾಲಿಕ ಆಟವಾಡುತ್ತಿದ್ದಾಗ ಆಯಾತಪ್ಪಿ ಪಕ್ಕದಲ್ಲಿದ್ದ ಕಾಲುವೆಗೆ ಬಿದ್ದಿದ್ದಾಳೆ. ಕೂಡಲೇ ಮನೆಯವರ ಗಮನಕ್ಕೆ ಬಂದರೂ ಸಹ ಬಾಲಕಿ ಕೊಚ್ಚಿ ಹೋಗಿದ್ದಾಳೆ ಎನ್ನಲಾಗಿದೆ.
ಗುರುವಾರ ಸುರಿದ ಭಾರೀ ಮಳೆಯಿಂದ ರಾಜಕಾಲುವೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಾರತಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Next Story