ಕ್ವಾರಂಟೈನ್ನ ಎಸೆಸ್ಸೆಲ್ಸಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ತನಿಖೆಗೆ ಸಿಎಫ್ಐ ಆಗ್ರಹ
ಕುಂದಾಪುರ, ಜು.10: ಕೋಟ ಠಾಣಾ ವ್ಯಾಪ್ತಿಯಲ್ಲಿ ಕ್ವಾರಂಟೈನ್ನಲ್ಲಿದ್ದ ಎಸೆಸ್ಸೆಲ್ಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣದ ತನಿಖೆ ನಡೆಸಬೇಕು ಮತ್ತು ವಿದ್ಯಾರ್ಥಿಯ ಮೃತದೇಹ ಸೂಕ್ತ ಫ್ರೀಝರ್ ವ್ಯವಸ್ಥೆ ಇಲ್ಲದೆ ಕೊಳೆಯಲು ಬಿಟ್ಟ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಕುಂದಾಪುರ ವಲಯ ಸಮಿತಿಯು ಆಗ್ರಹಿಸಿದೆ.
ಕೋವಿಡ್ ಆತಂಕದಲ್ಲಿ ಪರೀಕ್ಷೆ ಬರೆದ ಬೆನ್ನಲ್ಲೇ ವಿದ್ಯಾರ್ಥಿಯನ್ನು ಕ್ವಾರಂಟೈನ್ಗೆ ಒಳಪಡಿಸಿರುವುದರಿಂದ ಮಾನಸಿಕವಾಗಿ ವಿದ್ಯಾರ್ಥಿಯು ಹೆದರಿರಬಹುದು. ಇದರಿಂದ ಆತ್ಮಹತ್ಯೆ ಮಾಡಿರುವ ಸಾದ್ಯತೆ ಇದೆ. ಇನ್ನೊಂದು ಕಡೆ ಆತ್ಮಹತ್ಯೆ ಮಾಡಿದ ವಿದ್ಯಾರ್ಥಿಯ ಶವವನ್ನು ಕೋವಿಡ್ ಪರೀಕ್ಷೆಯ ವರದಿ ಬಂದಿಲ್ಲ ಎಂಬ ನೆಪವೊಡ್ಡಿ ಬ್ರಹ್ಮಾವರ ಸಮುದಾಯ ಕೇಂದ್ರದ ಶವಾಗಾರದಲ್ಲಿಟ್ಟು, ಸೂಕ್ತ ಫ್ರೀಝರ್ ವ್ಯವಸ್ಥೆ ಇಲ್ಲದ ಕಾರಣ ಕೊಳೆತು ವಾಸನೆ ಬರುವಂತೆ ಅಧಿಕಾರಿಗಳು ಮಾಡಿದ್ದಾರೆ ಎಂದು ಸಿಎಫ್ಐ ಆರೋಪಿಸಿದೆ.
ಒಟ್ಟು ಈ ಪ್ರಕರಣವನ್ನು ಜಿಲ್ಲಾಡಳಿತವು ಗಂಭೀರವಾಗಿ ಪರಿಗಣಿಸಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿ ತಪ್ಪಿತಸ್ಥಿರಿಗೆ ಕಠಿಣ ಶಿಕ್ಷೆಗೊಳಪಡಿಸುವ ಮೂಲಕ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಕುಂದಾಪುರ ವಲಯ ಅಧ್ಯಕ್ಷ ಝೀಶಾನ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.