ಕೋವಿಡ್ ನಿಭಾಯಿಸಲು ಸರಕಾರಕ್ಕೆ ಬೆಂಬಲ ನೀಡೋಣ, ಆದರೆ ಲೂಟಿಗಲ್ಲ: ಕುಮಾರಸ್ವಾಮಿ
ಬೆಂಗಳೂರು, ಜು. 12: `ಕೋವಿಡ್-19 ಸೋಂಕು ನಿಭಾಯಿಸಲು ಸರಕಾರಕ್ಕೆ ಬೆಂಬಲ ನೀಡೋಣ. ಆದರೆ, ಕೋವಿಡ್ ಕಾಲದ ಈ ಲೂಟಿಗಲ್ಲ. ಸರಕಾರ ಕೂಡಲೇ ತಿರುಪತಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಸತಿ ಸಮುಚ್ಛಯ ಯೋಜನೆಯನ್ನು ನಿಲ್ಲಿಸಲಿ' ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, 'ನಾನು ಮುಖ್ಯಮಂತ್ರಿ ಆಗಿದ್ದಾಗ ಕೇವಲ 26 ಕೋಟಿ ರೂ. ಆಗಿದ್ದ ತಿರುಪತಿ ವಸತಿ ಸಮುಚ್ಛಯ ಯೋಜನೆ, ಬಿ.ಎಸ್.ಯಡಿಯೂರಪ್ಪ ಸರಕಾರದಲ್ಲಿ, ಒಂದೇ ವರ್ಷದಲ್ಲಿ 200 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಕೋವಿಡ್ ಸಂಕಷ್ಟದಲ್ಲಿ ಈ ಯೋಜನೆಯನ್ನು ನಿಲ್ಲಿಸಲಿ ಎಂದು ಒತ್ತಾಯ ಮಾಡಿದ್ದಾರೆ.
ಈ ಯೋಜನೆಗೆ ರಾಜ್ಯ ಸರಕಾರ ಟಿಟಿಡಿಗೆ 200 ಕೋಟಿ ರೂ., ವಿನ್ಯಾಸ, ವಾಸ್ತುಶಿಲ್ಪಕ್ಕಾಗಿ ಖಾಸಗಿ ಸಂಸ್ಥೆಗೆ ಯೋಜನೆಯ ಶೇ.5 (10 ಕೋಟಿ ರೂ.) ಅನ್ನು ನೀಡುತ್ತಿದೆ. ಈ ಯೋಜನೆ ಕೈಗೆತ್ತಿಕೊಳ್ಳಲು ರಾಜ್ಯದ ಲೋಕೋಪಯೋಗಿ ಇಲಾಖೆ ಶಕ್ತವಲ್ಲವೇ? ವಿನ್ಯಾಸ ರೂಪಿಸಲು ಇಲಾಖೆಯಲ್ಲಿ ಯಾರೂ ಇಲ್ಲವೇ? ಕೋವಿಡ್ ಸಂಕಷ್ಟ ಕಾಲದಲ್ಲಿ ಈ ಯೋಜನೆ ಅಗತ್ಯವಾದರೂ ಏನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.