ಬಿಬಿಎಂಪಿ ಸದಸ್ಯ ಇಮ್ರಾನ್ ಪಾಷಾಗೆ ಕೋರ್ಟ್ ನಿಂದ ಜಾಮೀನು
ಬೆಂಗಳೂರು, ಜು.14: ಕೊರೋನ ಮಾರ್ಗಸೂಚಿ ಉಲ್ಲಂಘಿಸಿದ ಆರೋಪದ ಮೇಲೆ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿದ್ದ ಪಾದರಾಯನಪುರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾಗೆ ನಗರದ ಮ್ಯಾಜಿಸ್ಟ್ರೇಟ್ ಕೋರ್ಟ್ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಇಮ್ರಾನ್ ಪಾಷಾ ಸೇರಿ 21 ಮಂದಿಗೆ ಜಾಮೀನು ಮಂಜೂರು ಮಾಡಿತು. ಸರಕಾರದ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಇಮ್ರಾನ್ ಪಾಷಾ ಹಾಗೂ ತಂಡದ ಮೇಲಿದೆ. ಈ ಹಿನ್ನೆಲೆ ಅವರನ್ನು ಬಂಧಿಸಲಾಗಿತ್ತು.
ಕೊರೋನ ಸೋಂಕಿಗೀಡಾಗಿದ್ದ ಇಮ್ರಾನ್ ಪಾಷ್, ಆಸ್ಪತ್ರೆಯಿಂದ ಹೊರ ಬಂದ ಹಿನ್ನೆಲೆ ಬೆಂಬಲಿಗರಿಂದ ಭರ್ಜರಿ ಸ್ವಾಗತ ಮೆರವಣಿಗೆ ಮಾಡಿಸಿಕೊಂಡಿದ್ದರು. ಅಲ್ಲದೆ, ಆಸ್ಪತ್ರೆಗೆ ತೆರಳುವಾಗಲೂ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಬೆಂಬಲಿಗರಿಗೆ ಕೈ ಬೀಸಿ ಪ್ರಚೋದನೆ ನೀಡಿದ್ದ ಆರೋಪ ಎದುರಿಸುತ್ತಿದ್ದರು.
Next Story