ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ಮೋದಿ ಯಾವುದೇ ಕೊಡುಗೆ ನೀಡಿಲ್ಲ: ಸುಬ್ರಮಣಿಯನ್ ಸ್ವಾಮಿ
ಹೊಸದಿಲ್ಲಿ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.
“ರಾಮ ಮಂದಿರಕ್ಕಾಗಿ ಎಲ್ಲಾ ವಾದಗಳು ಹಾಗೂ ಚರ್ಚೆಗಳನ್ನು ನಾವು ಮಾಡಿದ್ದೆವು. ಸುಪ್ರೀಂ ಕೋರ್ಟ್ ದೇವಸ್ಥಾನ ನಿರ್ಮಾಣಕ್ಕೆ ಅನುಕೂಲಕರ ತೀರ್ಪು ನೀಡುವುದಕ್ಕಾಗಿ ಪ್ರಮುಖ ಎನ್ನಬಹುದಾದ ಏನನ್ನೂ ಸರಕಾರ ಮಾಡಿರಲಿಲ್ಲ'' ಎಂದು ಟಿವಿ9 ಭಾರತ್ವರ್ಷ್ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಸ್ವಾಮಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಅಜೆಂಡಾ ಮುಂದುವರಿಸಿಕೊಂಡು ಹೋಗುವಲ್ಲಿ ಮಾಜಿ ಪ್ರಧಾನಿಗಳೂ ಕಾಂಗ್ರೆಸ್ ನಾಯಕರೂ ಆದ ರಾಜೀವ್ ಗಾಂಧಿ ಹಾಗೂ ಪಿ ವಿ ನರಸಿಂಹರಾವ್ ಮತ್ತು ವಿಶ್ವ ಹಿಂದು ಪರಿಷತ್ತಿನ ಅಶೋಕ್ ಸಿಂಘಾಲ್ ಶ್ರಮಿಸಿದ್ದರು ಎಂದು ಸ್ವಾಮಿ ಹೇಳಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಆಗಸ್ಟ್ 5ರಂದು ಪ್ರಧಾನಿ ಭೂಮಿ ಪೂಜೆ ನೆರವೇರಿಸಲಿರುವ ಸಂದರ್ಭದಲ್ಲಿ ಸುಬ್ರಮಣಿಯನ್ ಸ್ವಾಮಿಯ ಈ ಹೇಳಿಕೆ ಮಹತ್ವ ಪಡೆದಿದೆ.