ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೋಮ್ ಕ್ವಾರಂಟೈನ್
ಉಡುಪಿ, ಆ.3: ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪ ಅವರ ಸಂಪರ್ಕಕ್ಕೆ ಬಂದಿದ್ದ ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇದೀಗ ಬ್ರಹ್ಮಾವರ ತಾಲೂಕಿನ ಕೋಟದ ತಮ್ಮ ಮನೆಯಲ್ಲಿ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ.
ಮುಖ್ಯಮಂತ್ರಿಗಳ ಕೊರೋನಾ ಪರೀಕ್ಷಾ ವರದಿ ನಿನ್ನೆ ಪಾಸಿಟಿವ್ ಬಂದಿದ್ದು, ಈ ವಿಷಯವನ್ನು ಸ್ವತಹ ಪ್ರಕಟಿಸಿದ್ದ ಯಡಿಯೂರಪ್ಪ ಅವರು, ಕಳೆದ ಕೆಲವು ದಿನಗಳಲ್ಲಿ ನನ್ನ ಸಂಪರ್ಕಕ್ಕೆ ಬಂದಿರುವವರು ಕ್ವಾರಂಟೈನ್ನಲ್ಲಿದ್ದು, ಮುಂಜಾಗ್ರತೆ ವಹಿಸುವಂತೆ ಕರೆ ನೀಡಿದ್ದರು. ಇದರಂತೆ ಜು.30ರಂದು ಬೆಂಗಳೂರಿನಲ್ಲಿ ಕೋಟ ಅವರು ಮುಖ್ಯಮಂತ್ರಿ ಗಳನ್ನು ಭೇಟಿಯಾಗಿದ್ದರು. ತಾನು ಮಂಗಳವಾರ ಕೋವಿಡ್-19 ಪರೀಕ್ಷೆಗೊಳ ಗಾಗುವುದಾಗಿ ಅವರು ಪ್ರಕಟಿಸಿದ್ದಾರೆ.
ಕಳೆದ ಐದು ದಿನಗಳಿಂದ ನನ್ನಲ್ಲಿ ಯಾವುದೇ ಕೊರೋನ ರೋಗ ಲಕ್ಷಣಗಳಿಲ್ಲ. ಮುಂಜಾಗ್ರತೆ ದೃಷ್ಟಿಯಿಂದ ಕ್ವಾರಂಟೈನ್ ಆಗಿದ್ದೇನೆ. ವರದಿ ನೆಗೆಟಿವ್ ಬಂದರೆ ಕೆಲಸ ಕಾರ್ಯ ಮುಂದುವರೆಸುತ್ತೇನೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ. ಮುಖ್ಯಮಂತ್ರಿಗಳು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.