ಕಾಪುವಿನಲ್ಲಿ ಕಾಂಗ್ರೆಸ್ ಆರೋಗ್ಯ ಅಭಯ ಹಸ್ತಕ್ಕೆ ಚಾಲನೆ
ಕಾಪು : ಬಿಜೆಪಿ ಸರ್ಕಾರವು ತನ್ನ ತಪ್ಪು ಕಾರ್ಯಗಳನ್ನು ಸಮರ್ಥಿಸುವುದಕ್ಕಾಗಿ ತಪ್ಪು ಸಂದೇಶಗಳನ್ನು ಜನರಿಗೆ ನೀಡುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂ ರಾವ್ ಆರೋಪಿಸಿದರು.
ರಾಜ್ಯಾದ್ಯಂತ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಹಮ್ಮಿಕೊಂಡ ಕೋವಿಡ್-19 ಹಿನ್ನಲೆಯಲ್ಲಿ 'ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ' ಕಾರ್ಯಕ್ರಮವನ್ನು ಸೋಮವಾರ ಕಾಪು ರಾಜೀವ ಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜನರ ಧಾರ್ಮಿಕ ಭಾವನೆಗಳೊಂದಿಗೆ ಕೇಂದ್ರ ಸರಕಾರ ಚೆಲ್ಲಾಟ ಆಡುತ್ತಿದೆ. ಕಾಂಗ್ರೆಸ್ ಎಲ್ಲಾ ಜಾತಿ, ವರ್ಗವನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಪಕ್ಷ. ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಕೆಲಸ ಮಾಡಬೇಕಿದೆ. ಆಗ ಮತ್ತೆ ಕಾಂಗ್ರೆಸ್ ಪ್ರಾಭಲ್ಯ ಪಡೆಯಲಿದೆ ಎಂದು ನುಡಿದರು.
ಮಾಜಿ ಸಚಿವೆ ಜಯಮಾಲಾ ಮಾತನಾಡಿ, ಲಾಕ್ಡೌನ್ನಿಂದ ಜನರು ಹೆಚ್ಚಿನ ಸಾವು ನೋವು ಅನುಭವಿಸಿದ್ದಾರೆ. ಈ ನರಕ ಯಾತನೆಗಾಗಿ ಜನರಿಗೆ ಸಾಂತ್ವನ ಹೇಳುವ ಅತ್ಯಗತ್ಯ ಇದೆ. ಪ್ರೀತಿಯ ಅವರ ಕಷ್ಠಕ್ಕೆ ಹೆಗಲು ನೀಡಬೇಕು. ಜನರ ಋಣ ತೀರಿಸಲು 'ಕಾಂಗ್ರೆಸ್ ಆರೋಗ್ಯ ಅಭಯ ಹಸ್ತ' ಕಾರ್ಯಕ್ರಮ ಮಾಡುತ್ತದೆ. ಇದೊಂದು ಸದವಕಾಶ ಆಗಿದೆ ಎಂದರು.
ಮಾಜಿ ಸಚಿವ ವಿನಯ ಕೂಮಾರ್ ಸೊರಕೆ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ನಡಿಗೆ ಜನರ ಬಳಿಗೆ ಎಂಬ ಕಾರ್ಯಕ್ರಮ ಹಮ್ಮಿ ಕೊಂಡಿದೆ. ಈಗಿನ ಕೊರೋನ ಸಂದರ್ಭ ಕಾಂಗ್ರೆಸ್ ಪಕ್ಷವು ಜನರಿಗೆ ಸಾಂತ್ವನ ನೀಡುವ ಸಲುವಾಗಿ ಕಾಂಗ್ರೆಸ್ ಆರೋಗ್ಯ ಅಭಯ ಹಸ್ಯ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಿಂದ ಜನರು ಜಾಗರೂಕರಾಗಿ, ಕೊರೋನವನ್ನು ಎದುರಿಸುವ ಶಕ್ತಿ ಪಡೆಯ ಬೇಕೆಂದು ಹೇಳಿದರು.
ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಉಡುಪಿ ಜಿಲ್ಲಾಧ್ಯಕ್ಷ ಆಶೋಕ್ ಕುಮಾರ್ ಕೊಡವೂರು, ಕೆಪಿಸಿಸಿ ಉಸ್ತುವಾರಿ ಜಿ.ಎ ಬಾವ, ಕಾಂಗ್ರೆಸ್ ಮುಖಂಡರಾದ ಎಂ ಎ ಗಫೂರ್, ಡಾ. ಹರೀಶ್ ಕುಮಾರ್, ನವೀನ್ ಚಂದ್ರ ಜೆ ಶೆಟ್ಟಿ, ಅಬ್ದುಲ್ ಅಝೀಝ್ ಹೆಜಮಾಡಿ, ಇಸ್ಮಾಯಿಲ್ ಆತ್ರಾಡಿ, ವಿಶ್ವಾಸ್ ಅಮೀನ್, ಅಖಿಲೇಶ್ ಕೋಟ್ಯಾನ್, ದಿನೇಶ್ ಕೋಟ್ಯಾನ್, ಕೇಶವ್ ಹೆಜಮಾಡಿ, ಶೇಖಬ್ಬ ಯು.ಸಿ, ಅಮೀರ್ ಮುಹಮ್ಮದ್ ಕಾಪು, ಸರಸು ಬಂಗೇರ ಮತ್ತಿತರರು ಉಪಸ್ಥಿತರಿದ್ದರು.