ಯುಪಿಎಸ್ಸಿ ಪರೀಕ್ಷೆ: ದೃಷ್ಟಿ ಸಮಸ್ಯೆ ನಡುವೆಯೂ 465ನೇ ರ್ಯಾಂಕ್ ಪಡೆದ ಮೈಸೂರು ಮೂಲದ ಮೇಘನಾ
ಕೆ.ಟಿ.ಮೇಘನಾ
ಮೈಸೂರು,ಆ.4; ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ದೇಶದ ಅತ್ಯುನ್ನತ ನಾಗರೀಕ ಸೇವೆಗಳ ನೇಮಕಕ್ಕೆ 2019-20ನೇ ಸಾಲಿನಲ್ಲಿ ನಡೆಸಿದ ಪರೀಕ್ಷೆಯಲ್ಲಿ ಮೈಸೂರು ಮೂಲದ ಕೆ.ಟಿ.ಮೇಘನಾ 465ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕುಡುಕೂರು ನಿವಾಸಿಯಾಗಿರುವ ಹಾಲಿ ಬೆಂಗಳೂರಿನ ಕೆಂಗೇರಿಯಲ್ಲಿ ವಾಸವಾಗಿರುವ ತಾಂಡವಮೂರ್ತಿ ಹಾಗೂ ನವನೀತ ದಂಪತಿ ಪುತ್ರಿ ಮೇಘನಾ ಅವರು ಪೂರ್ಣ ಪ್ರಮಾಣದಲ್ಲಿ ದೃಷ್ಟಿ ಸಮಸ್ಯೆ ಎದುರಿಸುತ್ತಿದ್ದಾರೆ. 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆ ರೆಟಿನಾ ಸಮಸ್ಯೆ ಎದುರಾಗಿ ಶೇ.70 ರಷ್ಟು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ಆದರೆ ತಮಗಿರುವ ಅಂಗವೈಕಲ್ಯವನ್ನು ಮೆಟ್ಟಿನಿಂತು ಯುಪಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಸಾಧನೆ ಮಾಡಿದ್ದಾರೆ.
ತಮ್ಮ ಶಾಲಾ-ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದ್ದ ಮೇಘನಾ, 2015ನೇ ಬ್ಯಾಚ್ನಲ್ಲಿ 11 ನೇ ರ್ಯಾಂಕ್ ಪಡೆದು ಕೆಎಎಸ್ ಪರೀಕ್ಷೆಯಲ್ಲಿ ಪಾಸಾಗಿದ್ದರು. ಸದ್ಯ ಮೂರು ತಿಂಗಳಿನಿಂದ ಬೆಂಗಳೂರಿನಲ್ಲಿ ಖಜಾನೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳ ಸಾಧನೆ ಬಗ್ಗೆ ತಂದೆ ತಾಂಡವಮೂರ್ತಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಪ್ರಜ್ವಲ್ಗೆ 636 ನೇ ರ್ಯಾಂಕ್
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) 2019ರಲ್ಲಿ ನಡೆದ ನಾಗರೀಕ ಸೇವಾ ಪರೀಕ್ಷೆಯಲ್ಲಿ ಮೈಸೂರಿನ ಪ್ರಜ್ವಲ್ 636ನೇ ರ್ಯಾಂಕ್ ಪಡೆದಿದ್ದಾರೆ.
ಮೈಸೂರಿನ ವಿಜಯಶ್ರೀ ಪುರದ ನಿವಾಸಿಯಾದ ಇವರು ಸತತ ನಾಲ್ಕನೇ ಪ್ರಯತ್ನದಲ್ಲಿ ಯುಪಿಎಸ್ ಪರೀಕ್ಷೆ ಪಾಸ್ ಮಾಡುವ ಮೂಲಕ ಯಶಸ್ಸು ಕಂಡಿದ್ದಾರೆ. ಮೈಸೂರಿನ ಎನ್ಐಇ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಅವರು ಸದ್ಯ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.