ಹಿಂದಿ ಭಾಷೆ ಬಳಕೆಗೆ ವಿರೋಧ ಬೇಡ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಧಾರವಾಡ, ಆ.8: ಪ್ರತಿಯೊಬ್ಬರಿಗೂ ನಮ್ಮ ಭಾಷೆ, ನಮ್ಮ ದೇಶ ಎಂಬ ಸ್ವಾಭಿಮಾನವಿರಲಿ ಬರುವ 21ನೆ ಶತಮಾನ ಭಾರತೀಯರದ್ದಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಶನಿವಾರ ಧಾರವಾಡ ನಗರದ ಹಿಂದಿ ಪ್ರಚಾರ ಸಭಾದ ಆವರಣದಲ್ಲಿ ಸ್ಥಾಪಿಸಿರುವ ಬೃಹತ್ ರಾಷ್ಟ್ರ ಧ್ವಜಸ್ತಂಭ ಉದ್ಘಾಟಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಉತ್ಪಾದನೆಯಾಗುವ ಉತ್ಪನಗಳನ್ನು ಬಳಸುವ ಮೂಲಕ ಆತ್ಮನಿರ್ಭರ ಯೋಜನೆಗೆ ಬಲ ತುಂಬಬೇಕು ಎಂದರು.
ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ರಾಷ್ಟ್ರದಲ್ಲಿ ಪ್ರಮುಖ ಸ್ಥಾನವಿದೆ. ಹಿಂದಿ ಬಳಕೆಗೆ ವಿರೋಧ ಬೇಡ. ಮನೆಯಲ್ಲಿ ಕನ್ನಡ ಮತ್ತು ಅದರೊಂದಿಗೆ ಹಿಂದಿ, ಇಂಗ್ಲಿಷ್ ಭಾಷೆಗಳ ಬಳಕೆಗೆ ಆದ್ಯತೆ ನೀಡಬೇಕು ಎಂದು ಅವರು ಕರೆ ನೀಡಿದರು.
ರಾಷ್ಟ್ರ ಧ್ವಜ ಗೌರವ ಹೆಚ್ಚಿಸುತ್ತಿದೆ. ದೇಶದ ಬದ್ಧತೆ, ನಮ್ಮತನ, ಸ್ವಾಲಂಬನೆಗಳನ್ನು ಬೆಳೆಸುತ್ತದೆ. ಹಿಂದಿ ಪ್ರಚಾರ ಸಭಾ ಆರಂಭದಿಂದಲೂ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದು ಪ್ರಹ್ಲಾದ್ ಜೋಶಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಧಾರವಾಡ ಹಿಂದಿ ಪ್ರಚಾರ ಸಭಾದ ಅಧ್ಯಕ್ಷ ಈರೇಶ ಅಂಚಟಗೇರಿ, ಆಡಳಿತ ಮಂಡಳಿಯ ಸದ್ಯಸರಾದ ಎಮ್.ಆರ್ ಪಾಟೀಲ್, ಅರುಣ ಜೋಶಿ, ಹಿಂದಿ ಪ್ರಚಾರ ಸಭಾ ಅಧೀನದ ವಿವಿಧ ಶಾಲೆ, ಕಾಲೇಜುಗಳ ಮುಖ್ಯಸ್ಥರು, ಅಧ್ಯಾಪಕರು, ಶಿಕ್ಷಕರು, ಸಿಬ್ಬಂದಿಗಳು ಸೇರಿದಂತೆ ಇತರರು ಪಾಲ್ಗೊಂಡಿದ್ದರು.