ಬಿಜೆಪಿ ಸಂಸದನ ವಿರುದ್ಧ 100 ಕೋ.ರೂ. ಮಾನಹಾನಿ ಪ್ರಕರಣ ದಾಖಲಿಸಿದ ಜಾರ್ಖಂಡ್ ಸಿಎಂ
ರಾಂಚಿ,ಆ.8: ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ವ್ಯಕ್ತಿತ್ವಕ್ಕೆ ಕುಂದನ್ನುಂಟು ಮಾಡಿದ್ದಕ್ಕಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೇನ್ ಅವರು ಇಲ್ಲಿಯ ಸಿವಿಲ್ ನ್ಯಾಯಾಲಯದಲ್ಲಿ ಬಿಜೆಪಿ ಸಂಸದ ನಿಶಿಕಾಂತ ದುಬೆ ವಿರುದ್ಧ 100 ಕೋ.ರೂ.ಗಳ ಮಾನಹಾನಿ ಪ್ರಕರಣವನ್ನು ದಾಖಲಿಸಿದ್ದಾರೆ.
ಆ.4ರಂದು ದಾಖಲಾಗಿರುವ ಪ್ರಕರಣದಲ್ಲಿ ದುಬೆ ಜೊತೆಗೆ ಟ್ವಿಟರ್ ಮತ್ತು ಫೇಸ್ ಬುಕ್ಗಳನ್ನೂ ಪ್ರತಿವಾದಿಗಳನ್ನಾಗಿ ಹೆಸರಿಸಲಾಗಿದ್ದು, ಅವರಿಂದ ತಲಾ 100 ಕೋ.ರೂ.ಗಳನ್ನು ಪರಿಹಾರವಾಗಿ ಕೊಡಿಸುವಂತೆ ಸೊರೇನ್ ಕೋರಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವಿವಿಧ ವಿಷಯಗಳಲ್ಲಿ ಸೊರೇನ್ ವಿರುದ್ಧ ದಾಳಿಗಳನ್ನು ನಡೆಸುತ್ತಲೇ ಇರುವ ದುಬೆ,ಸೊರೇನ್ 2013ರಲ್ಲಿ ಮುಂಬೈನಲ್ಲಿ ಮಹಿಳೆಯೋರ್ವಳ ಮೇಲೆ ಅತ್ಯಾಚಾರವೆಸಗಿದ್ದರು ಮತ್ತು ಆಕೆಯನ್ನು ಅಪಹರಿಸಿದ್ದರು ಎಂದು ಇತ್ತೀಚಿಗೆ ಟ್ವಿಟರ್ನಲ್ಲಿ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸೊರೇನ್,ಕಾನೂನು ಮಾರ್ಗದ ಮೂಲಕ ಉತ್ತರಿಸುವುದಾಗಿ ತಿಳಿಸಿದ್ದರು.
ಆ.5ರಂದು ಪ್ರಕರಣದ ಸಂಕ್ಷಿಪ್ತ ವಿಚಾರಣೆ ನಡೆದಿದ್ದು,ಮುಂದಿನ ವಿಚಾರಣೆ ಆ.22ಕ್ಕೆ ನಡೆಯಲಿದೆ.