ಕೋಝಿಕ್ಕೋಡ್ ವಿಮಾನ ನಿಲ್ದಾಣದ ರನ್ವೇ ಬಗ್ಗೆ ನಾಗರಿಕ ವಿಮಾನ ಯಾನ ತಜ್ಞರು 2011ರಲ್ಲೇ ಎಚ್ಚರಿಕೆ ನೀಡಿದ್ದರು
ಹೊಸದಿಲ್ಲಿ, ಆ. 8: ಕೋಝಿಕ್ಕೋಡ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಗೆ ಸಂಬಂಧಿಸಿ ಅಪಾಯಗಳ ಬಗ್ಗೆ ನಾಗರಿಕ ವಿಮಾನ ಯಾನ ಸಚಿವಾಲಯ, ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶಕ (ಡಿಜಿಸಿಎ) ಹಾಗೂ ಭಾರತದ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 2011ರಲ್ಲೇ ಎಚ್ಚರಿಕೆ ನೀಡಲಾಗಿತ್ತು ಎಂಬುದು ಈಗ ಬಹಿರಂಗಗೊಂಡಿದೆ.
ಕೋಝಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಅಪಾಯಗಳ ಬಗ್ಗೆ ಒಪಿಎಸ್-ಸಿಎಎಸ್ಎಸಿ (ಸರಕಾರ ನಿಯೋಜಿತ ವಾಯು ಸುರಕ್ಷಾ ಸಮಿತಿ-ನಾಗರಿಕ ವಿಮಾನ ಯಾನ ಸುರಕ್ಷಾ ಸಲಹಾ ಮಂಡಳಿ) ಸದಸ್ಯ ಕ್ಯಾಪ್ಟನ್ ರಂಗನಾಥನ್ನ ಅವರ 2011 ಜೂನ್ 17ರಂದು ಪತ್ರ ಬರೆದು ನಾಗರಿಕ ವಿಮಾನ ಯಾನ ಅಧಿಕಾರಿಗಳನ್ನು ಎಚ್ಚರಿಸಿದ್ದರು.
2010ರಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತಕ್ಕೊಳಗಾಗಿ 158 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿತ್ತು. ಕೋಝಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ದುರಂತದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.
ಈ ಪತ್ರವನ್ನು ಸಂಯುಕ್ತವಾಗಿ ಆಗಿನ ನಾಗರಿಕ ವಿಮಾನ ಯಾನದ ಕಾರ್ಯದರ್ಶಿ ಹಾಗೂ ಅಧ್ಯಕ್ಷ ನಸೀಮ್ ಝೈದಿ, ಸಿಎಎಸ್ಎಸಿ ಹಾಗೂ ಡಿಜಿಸಿಎಯ ಭಾರತ್ ಭೂಷಣ್ ಅವರಿಗೆ ಬರೆಯಲಾಗಿತ್ತು.
ಇದು ಅಪಾಯಕಾರಿ, ಮುಖ್ಯವಾಗಿ ಆರ್ದ್ರ ಪರಿಸ್ಥಿತಿಯಲ್ಲಿ. ರನ್ ವೇ ಅಂತ್ಯದ ಸುರಕ್ಷಾ ಪ್ರದೇಶ (ಆರ್ಇಎಸ್ಎ)ದ ಹಾಗೂ ರನ್ವೇಯ ಅಂತ್ಯದಲ್ಲಿರುವ ಭೂಪ್ರದೇಶದ ಕೊರತೆಯ ಹಿನ್ನೆಲೆಯಲ್ಲಿ ರನ್ವೇ ನಂ. 10ಕ್ಕೆ ಅನುಮತಿ ನೀಡಬಾರದು ಎಂದು ರಂಗನಾಥನ್ ಕೊಝಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲಾಣದ ರನ್ವೇ ಬಗ್ಗೆ ಎಚ್ಚರಿಕೆ ನೀಡಿದ್ದರು.
ಟೈಲ್ವಿಂಡ್ ಪರಿಸ್ಥಿತಿಯಲ್ಲಿ ರನ್ವೇ 10ರಲ್ಲಿ ಎಲ್ಲಾ ವಿಮಾನಗಳು ಇಳಿಯುವುದರಿಂದ ಎಲ್ಲ ಪ್ರಯಾಣಿಕರ ಜೀವಕ್ಕೆ ಅಪಾಯವಿದೆ ಎಂದು ರಂಗನಾಥನ್ ಪತ್ರದಲ್ಲಿ ಹೇಳಿದ್ದರು.
ರಂಗನಾಥನ್ ಅವರು ಪತ್ರದಲ್ಲಿ ನಾಗರಿಕ ವಿಮಾನ ಯಾನ ಪ್ರಾಧಿಕಾರಕ್ಕೆ ಅರುಣ್ ರಾವ್ ಎಂಬವರ ಸಲ್ಲಿಸಿದ ಪರಿಶೀಲನಾ ವರದಿಯನ್ನು ಉಲ್ಲೇಖಿಸಿದ್ದರು.
‘‘ಅರುಣ್ ರಾವ್ 2010ರಲ್ಲಿ ಗಮನ ಸೆಳೆದ ಸುರಕ್ಷಾ ಉಲ್ಲಂಘನೆಯನ್ನು ಗುರುತಿಸುವ ದಿಶೆಯಲ್ಲಿ ಭಾರತೀಯ ವಿಮಾನ ಯಾನ ಪ್ರಾಧಿಕಾರ ಯಾವುದೇ ರೀತಿ ಪ್ರಯತ್ನಿಸಿಲ್ಲ’’ ಎಂದು ರಂಗನಾಥ್ ಪತ್ರದಲ್ಲಿ ಹೇಳಿದ್ದರು.